ಶಾಲೆಗಳು ಗುರುವಾರದಿಂದ ಬಂದ್‌, ವೀಕೆಂಡ್‌ ಕರ್ಪ್ಯೂ ಜಾರಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.

ಬೆಂಗಳೂರಲ್ಲಿ 10 ಮತ್ತು 12 ನೇ ತರಗತಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಬಂದ್‌ ಮಾಡಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ. ಅಲ್ಲದೇ ನೈಟ್‌ ಕರ್ಪ್ಯೂ ಮುಂದುವರಿಸುವುದರ ಜೊತೆಗೆ ರಾಜ್ಯದಾದ್ಯಂತ ವೀಕೆಂಡ್‌ ಕರ್ಪ್ಯೂ ಜಾರಿ ಮಾಡಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ. ನಾಳೆ ರಾತ್ರಿಯಿಂದಲೇ ಹೊಸ ರೂಲ್ಸ್‌ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ್‌ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್‌ ತಾಂತ್ರಿಕ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು. ನೆರೆಯ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿಯೂ ಕೊರೊನಾ ಸ್ಪೋಟವಾಗಿದ್ದು, ದೆಹಲಿ, ಪಶ್ವಿಮಬಂಗಾಲ, ತೆಲಂಗಾಣದಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ಸಭೆಯನ್ನು ನಡೆಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರ ಜೊತೆಗೆ ಕೇರಳ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಕೋವಿಡ್‌ ಹಾಗೂ ಓಮಿಕ್ರಾನ್‌ ಬಗ್ಗೆ ತೀರ್ಮಾನ ಕೈಗೊಂಡಿದೆ. ಕೋವಿಡ್‌ಗಿಂತ ಓಮಿಕ್ರಾನ್‌ ಐದು ಪಟ್ಟು ಜಾಸ್ತಿ ಹರಡುತ್ತಿದೆ ಎಂದು ತಜ್ಞರು ವರದಿಯನ್ನು ನೀಡಿದ್ದಾರೆ. ಬೆಂಗಳೂರಲ್ಲಿ ಒಂದೇ ೩೦೪೮ ಕೊರೊನಾ ಪ್ರಕರಣ ದಾಖಲಾಗಿದ್ದು, ೧೪೭ ಓಮಿಕ್ರಾನ್‌ ಪ್ರಕರಣ ಇಂದು ಒಂದೇ ದಿನ ದಾಖಲಾಗಿದೆ. ಕೊರೊನಾ ಸೋಂಕು ಎರಡರಿಂದ ಮೂರು ದಿನದಲ್ಲಿ ದುಪ್ಪಟ್ಟಾಗುತ್ತಿದೆ.

ಐದಾರು ದಿನದಲ್ಲಿ ನಿತ್ಯವೂ ಹತ್ತು ಸಾವಿರ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ೨೦ರಿಂದ ೪೦ ವರ್ಷದವರನ್ನೇ ಹೆಚ್ಚಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಗೆ ಪ್ರತ್ಯೇಕ ರೂಲ್ಸ್‌ ಜಾರಿ ಮಾಡಲಾಗುತ್ತಿದೆ.

10 ಮತ್ತು12 ನೇ ತರಗತಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಎರಡು ವಾರದ ಮಟ್ಟಿಗೆ ಮುಚ್ಚಲಾಗುತ್ತದೆ. ಉಳಿದ ತರಗತಿಗಳಿಗೆ ಆನ್‌ಲೈನ್‌ ಕ್ಲಾಸ್‌ ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ. ಜನವರಿ 5 ರಿಂದ ರಾತ್ರಿ 10 ಗಂಟೆಯಿಂದಲೇ ಹೊಸ ರೂಲ್ಸ್‌ ಜಾರಿಗೆ ಬರಲಿದೆ. ಜನವರಿ 6 ರಿಂದ ಎರಡು ದಿನಗಳ ಕಾಲ ವೀಕೆಂಡ್‌ ಕರ್ಪ್ಯೂ ಜಾರಿಗೆ ಬರಲಿದೆ. ಸದ್ಯ ಜಾರಿಯಲ್ಲಿರುವ ನೈಟ್‌ ಕರ್ಪ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಮಾಲ್‌, ಚಿತ್ರಮಂದಿರ, ಪಬ್‌, ಬಾರ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೇ. 50 ರಷ್ಟು ಸಾಮರ್ಥ್ಯಕ್ಕೆ ಅನುಮತಿ ನೀಡಲಾಗಿದೆ. ಮದುವೆ ಹೊರಾಂಗಣ 200, ಒಳಾಂಗಣ 100 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಕಡೆಗಳಲ್ಲಿಯೂ ಎರಡು ಡೋಸ್‌ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕು. ಇನ್ನು ಹೊರರಾಜ್ಯದ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌ ಕಡ್ಡಾಯಗೊಳಿಸಲಾಗಿದೆ. ಸದ್ಯದ ಈ ನಿಯಮ ಮುಂದಿನ ಎರಡು ವಾರಗಳ ಕಾಲ ಜಾರಿಯಲ್ಲಿರಲಿದೆ.

ಇಂದು ಒಟ್ಟು 2,479 ಹೊಸ ಪ್ರಕರಣ ದಾಖಲಾಗಿದ್ದು, ನಾಲ್ವರು ಬಲಿಯಾಗಿದ್ದಾರೆ. ತತ ಮೂರು ದಿನಗಳಿಂದ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದ್ದು, ಇಂದು ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿದಾಟಿದೆ. ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿಯೇ ಬರೋಬ್ಬರಿ 2,053 ದಾಖಲಾಗಿದ್ದು, ಮೂರನೇ ಅಲೆಯ ಆತಂಕ ಶುರುವಾಗಿದೆ. ರಾಜ್ಯದಲ್ಲಿಂದು ಒಟ್ಟು 95,391 ಜನರಿಗೆ ಟೆಸ್ಟ್‌ ಮಾಡಿಸಲಾಗಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.2.59ಕ್ಕೆ ಏರಿಕೆ ಕಂಡಿದೆ. ಆದರೆ ರಾಜ್ಯದಲ್ಲಿ ಯಾವುದೇ ಓಮಿಕ್ರಾನ್‌ ಪ್ರಕರಣ ದಾಖಲಾಗಿಲ್ಲ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಮಹಾಸ್ಪೋಟದ ಜೊತೆಗೆ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ.

ಇದೀಗ ಕರ್ನಾಟಕದಲ್ಲಿಯೂ ಸತತವಾಗಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಡಿಸೆಂಬರ್‌ 27ರಂದು 289 ಪ್ರಕರಣ ದಾಖಲಾಗಿದ್ರೆ ಜನವರಿ 1 ರಂದು 1033 ಪ್ರಕರಣ ದಾಖಲಾಗಿತ್ತು. ಇದೀಗ ಜನವರಿ ೪ರಂದು ಬರೋಬ್ಬರಿ 2479 ಪ್ರಕರಣ ಪತ್ತೆಯಾಗಿದೆ. ಪ್ರತೀ ಎರಡರಿಂದ ಮೂರು ದಿನಗಳಿಗೆ ಒಮ್ಮೆ ಕೊರೊನಾ ಸೋಂಕಿತ ಪ್ರಕರಣ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

ಈಗಾಗಲೇ ಆರೋಗ್ಯ ಸಚಿವ ಸುಧಾಕರ್‌ ಅವರು ರಾಜ್ಯದಲ್ಲಿ ಮೂರನೇ ಅಲೆಯ ಆರಂಭವಾಗಿದೆ ಎಂದು ಹೇಳಿಕೆ ನೀಡಿದ್ದರು. ಇನ್ನೊಂದೆಡೆಯಲ್ಲಿ ತಜ್ಞರು ಜನವರಿ ಅಂತ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

 
 
 
 
 
 
 
 
 
 
 

Leave a Reply