“ರಂಗಭೂಮಿ (ರಿ.) ಉಡುಪಿ” 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ

ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ “ರಂಗಭೂಮಿ (ರಿ.) ಉಡುಪಿ” ತನ್ನ 57ನೇ ವರ್ಷದಲ್ಲಿ, ಇದೇ ನವಂಬರ್ ತಿಂಗಳ 4ನೇ ವಾರದಲ್ಲಿ ದಿ| ಡಾ| ಟಿ.ಎಂ.ಎ. ಪೈ, ದಿ| ಮಲ್ಪೆ ಮಧ್ವರಾಜ್ ಮತ್ತು ದಿ| ಎಸ್.ಎಲ್. ನಾರಾಯಣ ಭಟ್ ಸ್ಮಾರಕ ರಾಜ್ಯ ಮಟ್ಟದ 43ನೇ ಕನ್ನಡ ನಾಟಕ ಸ್ಪರ್ಧೆಯನ್ನು ಈ ಬಾರಿಯೂ ಕೋವಿಡ್-19 ಸಂಬoಧಿಸಿದ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ನಡೆಸಲಿದೆ.

ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ 1 ಘಂಟೆ 30 ನಿಮಿಷ ಹಾಗೂ ಗರಿಷ್ಟ 2 ಘಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು.

ಈ ಬಾರಿ ಸ್ಪರ್ಧೆಗೆ ಗರಿಷ್ಠ 12 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ. 35,000/-, ರೂ.25,000/-, ರೂ.15,000/-ದ ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲನಟನೆ/ ಹಾಸ್ಯ ಪಾತ್ರಗಳಿಗೆ ನಗದು ಸಹಿತ ಬಹುಮಾನ ನೀಡಲಾಗುವುದು.

ಸ್ಪರ್ಧೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿದ್ದ ತಂಡಕ್ಕೆ ವಿಶೇಷ ಪುರಸ್ಕಾರವಿರುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಒಟ್ಟು ದೂರಕ್ಕೆ ಕಿ.ಮಿ ಗೆ ರೂ.15/ ರಂತೆ ಕನಿಷ್ಠ ರೂ. 1500/-, ಗರಿಷ್ಠ ರೂ. 15000/- ಪ್ರಯಾಣ ವೆಚ್ಚ ನೀಡಲಾಗುವುದು ಹಾಗೂ ಪ್ರತೀ ತಂಡಕ್ಕೆ ಗೌರವಧನವಾಗಿ ರೂ. 5000/-ವನ್ನು ನೀಡಲಾಗುವುದು.

ತುಂಬಿದ ಪ್ರವೇಶ ಪತ್ರ ಸ್ವೀಕರಿಸಲು ಅಕ್ಟೋಬರ್ 21 ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್‌ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, `ರಂಗಭೂಮಿ&#೩೯;, ಕುತ್ಪಾಡಿ, ಉಡುಪಿ-574118 ಇವರಿಗೆ ಬರೆಯಬೇಕು. ಮೊಬೈಲ್ ಸಂಖ್ಯೆ : 9448652847(ಪ್ರದೀಪ್‌ಚಂದ್ರ ಕುತ್ಪಾಡಿ) ಅಥವಾ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು (9844742166) ಅಥವಾ ಜತೆ ಕಾರ್ಯದರ್ಶಿಗಳಾದ ಶ್ರೀಪಾದ ಹೆಗಡೆ (9845111449) ಹಾಗೂ ವಿವೇಕಾನಂದ ಎನ್. (944936765) ಇವರನ್ನು ಸಂಪರ್ಕಿಸಬಹುದು. ಹಾಗೆಯೇ ಸ್ಪರ್ಧೆ ನಡೆಯುವ ಸಮಯದಲ್ಲಿ ಸರಕಾರದ ಕೋವಿಡ್ 19ರ ಮಾರ್ಗಸೂಚಿ/ನಿಬಂಧನೆ ಬದಲಾದಲ್ಲಿ ನಮ್ಮ ಸಂಸ್ಥೆಯು ಅದಕ್ಕೆ ಬದ್ಧವಾಗಿರುತ್ತದೆ ಎಂದು “ರಂಗಭೂಮಿ” ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply