ಜೂನ್ 20ರ ಬಳಿಕ ಕರೊನಾ ಪರಿಸ್ಥಿತಿ ಸುಧಾರಣೆ: ಕೋಡಿಮಠದ ಶ್ರೀ ಭವಿಷ್ಯ

ಹಾಸನ: ಕೊರೋನಾ ಸಂಕಷ್ಟದಲ್ಲಿ ಮನುಕುಲ ನಲುಗಿ ಹೋಗಿದೆ. ಈ ಮಧ್ಯೆ ಮನುಷ್ಯ ಹೋಗು ಹೋಗುತ್ತಲೇ ಬಿದ್ದು ಸಾಯುವ ಕಾಲ ಬಂದೇ ಬರುತ್ತದೆ ಎಂದು ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಹಿಂದೆ ನೆಲಪಟ್ಟು ಎಂಬ ಕಾಯಿಲೆ ಇತ್ತು. ಅದಕ್ಕೆ ರಾಹು ಅಂತ ಹಿರಿಯರು ಕರೆಯುತ್ತಿದ್ದರು. ರಾಹು ಬಡೀತು, ಹೋಗ ಹೋಗ್ತಾ ಬಿದ್ದ ಅನ್ನೋರು. ಅಂತಹ ಕಾಯಿಲೆಗಳು ಮುಂದಿನ ದಿನಗಳಲ್ಲಿ ಬಂದೇ ಬರುತ್ತವೆ ಎಂದು ಭಾನುವಾರ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿ ಜೂನ್ 20ರ ಬಳಿಕ ಸುಧಾರಿಸಲಿದೆ.ಕರೊನಾ ಸಂಪೂರ್ಣ ಮಾಯವಾಗಲು ಇನ್ನೂ 10 ವರ್ಷ ಬೇಕಾಗುತ್ತದೆ. ಕಫ, ಪಿತ್ತ, ವಾತದ ಮೂಲಕ ಕಾಯಿಲೆ ಬಂದು ಮನುಷ್ಯ ನರಳುತ್ತಾನೆಂದು ಎರಡು ವರ್ಷದ ಹಿಂದೆಯೇ ಹೇಳಿದ್ದೆ. ಅದು ಈಗ ನಿಜವಾಗಿದೆ. ಪ್ರಳಯ ಆಗುತ್ತೆ ಅಂದಿದ್ದೆ. ಹಿಮಾಲಯದಲ್ಲಿ ಅದೂ ಘಟಿಸಿದೆ.

ಭವಿಷ್ಯದಲ್ಲಿ ಇನ್ನೊಂದು ದೊಡ್ಡ ಅಲೆ ಬರಲಿದ್ದು ಅದರ ಪರಿಣಾಮ ಕೆಟ್ಟದಿದೆ. ಈಗ ಹೂಳುತ್ತಿರುವ ಹೆಣಗಳು ಆಗ ಮಾತನಾಡುತ್ತವೆ. ನಾನು ಹೇಳುವುದನ್ನೆಲ್ಲ ನೀವು ನೋಡುತ್ತೀರಿ ಎಂದರು.

‘ಕುಂಭದಲ್ಲಿ ಗುರು ಬರಲು ತುಂಬುವುದು ಕೆರೆ-ಕಟ್ಟೆ, ಶಂಭುವಿನ ಪದಸಾಕ್ಷೆ ಡಂಬವೆನಿಸಲು’ ಅಂದರೆ, ಕುಂಭ ರಾಶಿಯಲಿ ಮಳೆ ಹೆಚ್ಚಿದ್ದು, ಅದರ ಜತೆ ಶೀತವೂ ಇರಲಿದೆ. ಶೀತ ಎಂದರೆ ಕಾಯಿಲೆ ಎಂದರ್ಥ.ಕಾರ್ತಿಕದವರೆಗೆ ಕರೊನಾ ಆರ್ಭಟ ಜೋರಾಗಿರಲಿದೆ. ಗಾಳಿ, ಆಕಾಶ ಹಾಗೂ ಭೂಮಿಯ ಸ್ವಚ್ಛತೆಗೆ ಹೀಗೆಲ್ಲ ಆಗುತ್ತಿದೆ.ಪ್ರಕೃತಿಯಿಂದ ಯೋಗವಿದೆ. ಸಂಕ್ರಾಂತಿ ಬಳಿಕ ವಿಶ್ವದಲ್ಲಿ ಬಹುದೊಡ್ಡ ವಿಪ್ಲವ ಸಂಭವಿಸಲಿದೆ. ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ. ರಾಜಕೀಯ ಭೀತಿ ಇದೆ. ಸಾಮೂಹಿಕ ಸಾವು-ನೋವು ಹೆಚ್ಚುತ್ತದೆ ಎಂದಿದ್ದಾರೆ.

 
 
 
 
 
 
 
 
 
 
 

Leave a Reply