ಬೆಂಗಳೂರು: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು 75 ವರ್ಷ ಮೇಲ್ಪಟ್ಟ ನಾಯಕರಿಗೆ ಸ್ಥಾನಮಾನ ಕೊಡುವುದಿಲ್ಲ ಎಂಬ ತೀರ್ಮಾನವನ್ನು ತೆಗೆದುಕೊಂಡರು.ಯಾರಿಗೂ ಅವಕಾಶ ಕೊಡಲಿಲ್ಲ. ಆದರೆ, ನನ್ನ ಬಗ್ಗೆ ಅತ್ಯಂತ ವಾತ್ಸಲ್ಯ, ಪ್ರೀತಿ ಮತ್ತು ವಿಶ್ವಾಸದಿಂದ ಎರಡು ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು ಎಂದು ಕಣ್ಣೀರಾ ಹಾಕುತ್ತಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಇಂದು ನಡೆದ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಬಿಎಸ್ವೈ, ಆರಂಭದಿಂದಲೇ ತುಂಬಾ ಭಾವುಕವಾಗಿ ಮಾತನಾಡಿದರು. ನಮ್ಮನ್ನು ಮಾತನಾಡಿಸಲು 50 ಮಂದಿ ಸಿಗದೇ ಇರುವ ಕಾಲದಲ್ಲಿ ಎಲ್ಲ ಕಾರ್ಯಕರ್ತರ ಜತೆಗೂಡಿ ರಾಜ್ಯಾದ್ಯಂತ ಪಾದಾಯಾತ್ರೆ ಮಾಡಿ ಪಕ್ಷ ಬಲಪಡಿಸುವ ಕೆಲಸವನ್ನು ನಾನು ಮಾಡಿದ್ದೇನೆ. ನಾನೆಂದು ಹಿಂದೆ ತಿರುಗಿ ನೋಡಲೇ ಇಲ್ಲ. ನನ್ನ ಕರ್ತವ್ಯವನ್ನು ಜನಮೆಚ್ಚುವ ರೀತಿಯಲ್ಲಿ ನಿರ್ವಹಿಸಿದೆ ಎಂಬ ತೃಪ್ತಿ ಮತ್ತು ಸಮಾಧಾನ ನನಗಿದೆ ಎಂದರು.
ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿದ ನಾನು ಶಿವಮೊಗ್ಗಕ್ಕೆ ಬಂದು ಶಿಕಾರಿಪುರದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಜೀವನವನ್ನು ಪ್ರಾರಂಭ ಮಾಡಿದೆ. ಆರ್ಎಸ್ಎಸ್ ಪ್ರಚಾರಕನಾಗಿ ಕೆಲಸ ಆರಂಭ ಮಾಡಿ, ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಪುರಸಭೆ ಅಧ್ಯಕ್ಷನಾದೆ. ಈ ವೇಳೆ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಕೂಡ ನಡೆಯಿತು. ನಾನು ಸತ್ತೇ ಹೋದೆ ಅಂದುಕೊಂಡಿದ್ದರು. ಆದರೆ, ಭಗವಂತನ ದಯೆಯಿಂದ ಬದುಕಿದೆ. ಇನ್ನು ಮುಂದೆ ಬದುಕಿದರೆ ನಾಡಿನ ಜನತೆಗಾಗಿ ಎಂದು ಅಂದೇ ತೀರ್ಮಾನಿಸಿದೆ. ಅಂದರಂತೆಯೇ ನಡೆದುಕೊಂಡೆ ಎಂಬ ತೃಪ್ತಿ ನನಗಿದೆ ಎಂದು ಭಾವುಕರಾಗಿ ಹೇಳಿದರು.