ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ ಕೆ ಸುರೇಶ್ ಅವರಿಗೆ ಇಂದು ಮುಂಜಾನೆ ಯಿಂದಲೇ ಸಿಬಿಐ ಬಿಸಿ ಮುಟ್ಟಿಸಿದೆಇಂದು ಮುಂಜಾನೆ ಸಿಬಿಐ ತಂಡ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆದಿದೆ. ಬೆಂಗಳೂರಿನ ದೊಡ್ಡಲಹಳ್ಳಿ, ಕನಕಪುರ, ಸದಾಶಿವನಗರ ಸೇರಿದಂತೆ 14 ಕಡೆಗಳಲ್ಲಿ ಸಿಬಿಐ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ದೆಹಲಿ ಹಾಗೂ ಮುಂಬೈಯಲ್ಲೂ ಡಿ ಕೆ ಶಿವಕುಮಾರ್ ಅವರಿಗೆ ಸೇರಿದ ಸ್ಥಳಗಳಲ್ಲಿ ಏಕಕಾಲದಲ್ಲಿ ಸಿಬಿಐ ದಾಳಿ ನಡೆದಿದೆ.
ಈ ಹಿಂದೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಡಿಕೆಶಿ ವಿಚಾರಣೆ ಎದುರಿಸಿದ್ದರು. ಅಲ್ಲದೆ, ಬಂಧನಕ್ಕೆ ಒಳಗಾಗಿ ಜೈಲು ವಾಸವನ್ನು ಅನುಭವಿಸಿ, ಜಾಮೀನಿನ ಮೂಲಕ ಹೊರಬಂದಿದ್ದಾರೆ. ಇದೀಗ ಸಿಬಿಐ ಅಧಿಕಾರಿಗಳು ದಾಳಿ ಮಾಡಿರುವುದು ಡಿಕೆಶಿ ಮತ್ತೊಮ್ಮೆ ಶಾಕ್ ಎದುರಾಗಿದೆ.
ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸಿಬಿಐಗೆ ನೀಡಿದ ವರದಿಯ ಬೆನ್ನಲ್ಲೇ ಇಂದಿನ ದಾಳಿ ನಡೆದಿದೆ. ಉಪಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಯತ್ನಗಳಿಗೆ ಹಿನ್ನಡೆಯನ್ನು ತರಲು ಬಿಜೆಪಿಯಿಂದ ಆಡಳಿತ ಯಂತ್ರ ದುರುಪಯೋಗ ನಡೆಸುವ ಮೂಲಕ ವ್ಯವಸ್ಥಿತವಾಗಿ ಈ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.