ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ಪುನರಾರಂಭ

ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ ಅಥವಾ ಹುಲಿಕಲ್‌ ಘಾಟಿಯ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ರಾತ್ರಿಯಿಂದ ವಾಹನ ಸಂಚಾರ ಪುನರಾರಂಭಗೊಂಡಿದೆ.

ಘಾಟಿ ರಸ್ತೆಯ ಕಾಂಕ್ರಿಟೀಕರಣ, ರಕ್ಷಣಾ ತಡೆಗೋಡೆ, ಚರಂಡಿ ಮತ್ತಿತರ ಕಾಮಗಾರಿಗಳಿಗಾಗಿ ಫೆ. 5ರಿಂದ ಎ. 5ರ ವರೆಗೆ ಈ ಘಾಟಿಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದರು. ಎ. 5ರಂದು ಕಾಮಗಾರಿ ಪೂರ್ಣಗೊಳ್ಳದ್ದರಿಂದ ನಿಷೇಧವನ್ನು 10 ದಿನಗಳ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಕಾಮಗಾರಿ ಬಹುತೇಕ ಪೂರಾಣಗೊಂಡ ಹಿನ್ನೆಲೆಯಲ್ಲಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಬಾಳೆಬರೆ ಘಾಟಿಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ಹುಲಿಕಲ್ ಚೆಕ್ ಪೋಸ್ಟ್ ನಿಂದ ಹೊಸಂಗಡಿಯ ಘಾಟಿಯ ಬುಡದ ವರೆಗೆ 14.5 ಕಿ.ಮೀ. ದೂರವಿದ್ದು ಶಿವಮೊಗ್ಗ ಜಿಲ್ಲೆಯ 8 ಕಿಮೀ ಪೈಕಿ ಈ ಹಿಂದೆಯೇ ಸ್ವಲ್ಪ ಕಾಂಕ್ರಿಟೀಕರಣ ನಡೆಸಲಾಗಿದ್ದು, ಈಗ ಬಾಕಿಯಿದ್ದ 2.5 ಕಿ.ಮೀ. ರಸ್ತೆ ಕಾಂಕ್ರಿಟೀಕರಣಗೊಂಡಿದೆ. ಇನ್ನೂ ಉಡುಪಿ ಜಿಲ್ಲೆಯ ಘಾಟಿ ಪೈಕಿ ಈ ಹಿಂದೆ 2 ಕಿ.ಮೀ. ಕಾಂಕ್ರಿಟೀಕರಣಗೊಂಡಿದ್ದು, ಈಗ ಒಂದು ಕಿ.ಮೀ. ಕಾಂಕ್ರಿಟೀಕರಣಗೊಂಡಿದ್ದು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿನ 3.5 ಕಿ.ಮೀ ಕಾಂಕ್ರಿಟೀಕರಣ ಬಾಕಿ ಉಳಿದಿದೆ.

ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಬಾಳೆಬರೆ ಘಾಟಿಯನ್ನು ಒಟ್ಟು 13 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣ, ರಕ್ಷಣಾ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ.

 
 
 
 
 
 
 
 
 

Leave a Reply