ಆಟೋ ಡಿಕ್ಕಿ: ಕರ್ತವ್ಯನಿರತ ಟ್ರಾಫಿಕ್‌ ಎಎಸ್‌ಐ ಸಾವು

ರಾಜ್ಯದ ಟ್ರಾಫಿಕ್‌ ಸಿಟಿಯೆಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ಕರ್ತವ್ಯ ನಿರತ ಸಂಚಾರಿ ವಿಭಾಗದ ಆಸಿಸ್ಟಂಟ್‌ ಸಬ್‌ ಇನ್ಸ್‌ಪೆಕ್ಟರ್ (ಎಸ್‌ಐ) ನಾಗರಾಜು ಅವರಿಗೆ ಆಟೋ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಭಾನುವಾರ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಸರ್ಕಲ್ ಬಳಿ ರಸ್ತೆಯ ಬದಿ ನಿಂತಿ ಟ್ರಾಫಿಕ್‌ ದಟ್ಟಣೆಯನ್ನು ನಿಯಂತ್ರಣ ಮಾಡುತ್ತಿದ್ದ ಕರ್ತವ್ಯನಿರತ ಟ್ರಾಫಿಕ್‌ ಎಸ್‌ಐಗೆ ಆಟೋ ಚಾಲಕನೊಬ್ಬ ಗುದ್ದಿದ್ದನು. ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಗಾಯವಾಗಿದ್ದು, ಕೂಡಲೇ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿರಂತರ ಚಿಕಿತ್ಸೆಯ ನಂತರವೂ ಚೇತರಿಕೆ ಕಂಡುಬಂದಿರಲಿಲ್ಲ. ಆದರೆ, ಇಂದು ಚಿಕಿತ್ಸೆ ಫಲಿಸದೇ ಎಎಸ್ಐ ನಾಗರಾಜ್ ಸಾವನ್ನಪ್ಪಿದ್ದಾರೆ.

ಮೃತ ನಾಗರಾಜು ಅವರು ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಎಎಸ್ಐ ಆಗಿದ್ದರು. ಅಪಘಾತದ ನಂತರ ಏರ್ ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಕೊನೆಯುಸಿರೆಳೆದಿದ್ದಾರೆ. ಇನ್ನು ನಾಗರಾಜ್‌ ಅವರ ಬ್ರೈನ್‌ ಡೆಡ್‌ ಆಗಿದ್ದು, ಅವರ ಅಂಗಾಂಗಗಳನ್ನು ದಾನ ಮಾಡಲು ಕುಂಬ ಸದಸ್ಯರು ನಿರ್ಧಾರ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿ ಸಾವಿನಿಂದ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆ ಸೇರಿ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಮೌನಾಚರಣೆ ಮಾಡಲಾಯಿತು. ಇನ್ನು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

 ಭಾನುವಾರ ಬೆಳಗ್ಗೆ ವೇಳೆ ವಿರಳವಾದ ಟ್ರಾಫಿಕ್‌ ಇತ್ತು. ಈ ವೇಳೆ ರಸ್ತೆಯ ಬದಿಯಲ್ಲಿ ನಿಂತು ಸರಕು ಸಾಗಣೆ ವಾಹನಗಳಿಂದ ಉಂಟಾಗುತ್ತಿದ್ದ ಟ್ರಾಫಿಕ್‌ ನಿಯಂತ್ರಕ್ಕೆ ಮುಂದಾಗಿದ್ದರು. ಈ ವೇಳೆ ಆಟೋ ಚಾಲಕ ವೇಗವಾಗಿ ಬಂದು ಎಎಸ್‌ಐಗೆ ಗುದ್ದಿದ್ದನು. ಕೂಡಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

 ಕಳೆದ ಮೂರ್ನಾಲ್ಕು ತಿಂಗಳಿಂದ ಬೆಂಗಳೂರಿನಲ್ಲಿ ಕಚೇರಿ ದಿನಗಳಂದು ಬೆಳಗ್ಗೆ ಮತ್ತು ಸಂಜೆ ವೇಳೆ ಟ್ರಾಫಿಕ್‌ ಜಾಮ್‌ ಉಂಟಾಗುವುದು ಕಡಿಮೆಯಾಗಿದೆ. ಎಲ್ಲ ಪೊಲೀಸ್‌ ಅಧಿಕಾರಿಗಳು ಬೈಕ್‌, ಕಾರು ಅಡ್ಡಗಟ್ಟುವುದನ್ನು ಬಿಟ್ಟು ರಸ್ತೆಯ ಬದಿಯಲ್ಲಿ ಮೈಕ್‌ ಹಿಡಿದು ನಿಂತು ಟ್ರಾಫಿಕ್‌ ಜಾಮ್‌ ಆಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಲೂ ಪ್ರತಿನಿತ್ಯ ಕೆಲವು ಪೊಲೀಸರು ರಸ್ತೆಯ ಮಧ್ಯದಲ್ಲಿಯೇ ನಿಂತುಕೊಂಡು ಸಂಚಾರ ದಟ್ಟಣೆ ಉಂಟಾಗದಂತೆ ಶ್ರಮವಹಿಸುತ್ತಾರೆ. ಆದರೆ, ಈಗ ಟ್ರಾಫಿಕ್‌ ಎಎಸ್‌ಐ ನಿಧನದಿಂದ ಎಲ್ಲರಿಗೂ ಆತ್ಮಸ್ಥೈರ್ಯ ಕುಗ್ಗಿದಂತಾಗಿದೆ.

 
 
 
 
 
 
 
 
 

Leave a Reply