ಕೊರೊನಾ ಮೂರನೇ ಅಲೆಯಿಂದ ಮಕ್ಕಳಿಗಿಲ್ಲ ಗಂಭೀರ ಪರಿಣಾಮ : ಸಚಿವ ಡಾ. ಸುಧಾಕರ್

ದಾವಣಗೆರೆ: ಕೊರೊನಾ ಮೂರನೇ ಅಲೆ ಕಾಡಬೇಕು ಎಂದೇನಿಲ್ಲ. ನಾವು ಯಾವ ರೀತಿ ಇರುತ್ತೇವೆಯೋ ಆ ರೀತಿಯಲ್ಲಿ ಕೊರೊನಾ ನಿಗ್ರಹ ಸಾಧ್ಯ. ಲಸಿಕೆ ತೆಗೆದುಕೊಂಡು ಎಲ್ಲರೂ ಜಾಗ್ರತೆ ವಹಿಸಬೇಕು. ಮೂರನೇ ಅಲೆ ಬರುತ್ತೆ ಮಕ್ಕಳಿಗೆ ಹೆಚ್ಚಾಗಿ ಕಾಡುತ್ತೆ ಎಂಬುದೇ ಅವೈಜ್ಞಾನಿಕ. ಸೋಂಕು ಬಂದರೂ ಮಕ್ಕಳಿಗೆ ಗಂಭೀರವಾದ ವ್ಯಾಧಿ ಬರುವುದಿಲ್ಲ. ಪರಿಣಿತರು ಹಾಗೂ ತಜ್ಞರು ನೀಡಿರುವ ವರದಿಯಲ್ಲಿ ಹೇಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಸುಧಾಕರ್ ಹೇಳಿದರು.

ಮಾಧ್ಯಮದವರೊಂದಿಗೆ ಜಿಎಂಐಟಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಮೂರನೇ ಅಲೆಯಲ್ಲಿ ಪಾಸಿಟಿವ್ ಬಂದರೂ ಗಂಭೀರ ಪರಿಣಾಮ ಬೀರುವುದಿಲ್ಲ.‌ ಇದುವರೆಗೆ ಎರಡೂವರೆ ಕೋಟಿ ಲಸಿಕೆಗಳನ್ನು ನೀಡಿದ್ದೇವೆ. ಆಗಸ್ಟ್ ತಿಂಗಳಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಲಸಿಕೆ ಬರಲಿದ್ದು, ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುವುದು ಎಂದು ತಿಳಿಸಿದರು.

ಎಚ್ಚರ ತಪ್ಪಿದ್ರೆ ಮಾತ್ರ ಆಪತ್ತು ಖಚಿತ. ಈಗಾಗಲೇ ಕೇರಳದಲ್ಲಿ ಒಂದು ದಿನಕ್ಕೆ ಹದಿನೈದು ಸಾವಿರ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿ ರಾಜ್ಯಕ್ಕೆ ಹಂಚಿಕೊಂಡಿರುವ ಕಾರಣ ತೀವ್ರ ಎಚ್ಚರಿಕೆ ವಹಿಸಬೇಕಿದೆ. ಎರಡು ಅಲೆಗಳಲ್ಲಿ ಅಲ್ಲಿ ಜಾಸ್ತಿಯಾದ ಕಾರಣ ಇಲ್ಲೂ ಜಾಸ್ತಿಯಾಗಿತ್ತು. ಮರುಕಳಿಸಬಾರದು ಎಂದರೆ ನಾವೆಲ್ಲರೂ ಎಚ್ಚರಿಕೆ ವಹಿಸಲೇಬೇಕಿದೆ. ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.

ಲಸಿಕೆ ನೀಡಿಕೆ ಕುರಿತು ಹೈಕೋರ್ಟ್ ನಿರ್ದೇಶನ ನೀಡಿದ್ದು, ಬದ್ಧತೆ ಹಾಗೂ ಭಾವನೆಯನ್ನು ಕೋರ್ಟ್ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ಖಾಸಗಿಯವರು ಲಸಿಕೆ ನೀಡುತ್ತಿರುವುದರಿಂದ ಹೆಚ್ಚು ಡೋಸ್ ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

 

 

 

 

 
 
 
 
 
 
 
 
 
 
 

Leave a Reply