ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವಿನ ವೋಟ್‌ಬ್ಯಾಂಕ್ ರಾಜಕೀಯ- ಸಂಸದೆ ಶೋಭಾ

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ಪ್ರವಾದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಾಕಲಾಗಿದೆ ಎಂಬುದನ್ನೇ ನೆವ ಮಾಡಿಕೊಂಡು ನಡೆದ ಗಲಭೆ ಹಿಂದೆ ಬಹಳ ವ್ಯವಸ್ಥಿತವಾದ ಷಡ್ಯಂತ್ರವಿದೆ . ವೋಟ್‌ಬ್ಯಾಂಕ್ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವೆ ನಡೆಯುತ್ತಿರುವ ಮೇಲಾಟದಲ್ಲಿ ಬಹುಸಂಖ್ಯಾತರನ್ನು ಬಲಿಪಶು ಮಾಡಲಾಗುತ್ತಿರುವುದು ಕಳವಳಕಾರಿ ಎಂಬುದಾಗಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆತಂಕ ವ್ಯಕ್ತಪಡಿಸಿದ್ದಾರೆ.


ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬಂದ ಮುಸ್ಲಿಮ್ ಮುಖಂಡರ ಹಿಂದೆ 3೦೦೦ ಜನ ವ್ಯವಸ್ಥಿತವಾಗಿ ಬಂದುದು ಹೇಗೆ… ಈ ದುಷ್ಕರ್ಮಿಗಳ ಕೈಗೆ ಪೆಟ್ರೋಲ್, ಕಲ್ಲು, ಶಸ್ತ್ರಾಸ್ತ್ರಗಳೆಲ್ಲಿಂದ ಬಂದವು… ಪೊಲೀಸ್ ಠಾಣೆಗೆ ದಾಳಿ ಮಾಡುವ ಭಂಡಧೈರ್ಯ ಎಲ್ಲಿಂದ ಬಂತು… ಎಂಬುದಾಗಿ ಪ್ರಶ್ನಿಸಿರುವ ಶೋಭಾ ಅವರು , ಇದರ ಹಿಂದೆ ಮುಖಂಡರ ಕುಮ್ಮಕ್ಕಿದೆ ಎಂಬುದು ಸ್ಪಷ್ಟ. ಇದು ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವೆ ನಡೆದಿರುವ ವೋಟ್‌ ಬ್ಯಾಂಕ್ ರಾಜಕೀಯದ ಮೇಲಾಟದ ಫಲ ಎಂಬುದಾಗಿ ತರಾಟೆಗೆತ್ತಿಕೊಂಡಿದ್ದಾರೆ.


ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಸಂದೇಶದ ಬಗೆಗೇ ಸಂಶಯವಿದ್ದು, ಅದನ್ನು ಮತೀಯವಾದಿಗಳೇ ಹಾಕಿರುವ ಬಗ್ಗೆ ಅನುಮಾನವಿದೆ. ಇದಕ್ಕೆ ಸಂಬಂದಿಸಿದಂತೆ ಮುಜಾಮಿಲ್ ಪಾಷಾ ಮತ್ತು ಆತನ ಬೆಂಬಲಿಗರನ್ನು ಬಂದಿಸುವಂತೆ ಸರ್ಕಾರವನ್ನು ವಿನಂತಿಸುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ನುಡಿದರು. ಪ್ರವಾದಿ ನಿಂದೆ ವಿರೋಧದ ಹೆಸರಿನಲ್ಲಿ ದುಷ್ಕರ್ಮಿಗಳು ಅಮಾಯಕರ ಮನೆಗಳ ಮೇಲೆ ನಡೆಸಿದ ಬರ್ಬರ ದಾಳಿ ಮತ್ತು ತಮ್ಮದೇ ಪಕ್ಷದ ಶಾಸಕನ ಮನೆ ಮೇಲೆ ನಡೆದ ದಾಳಿಯನ್ನು ಕೂಡಾ ಖಂಡಿಸಲು ಕಾಂಗ್ರೆಸ್ ನಾಯಕರು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಅವರ ಈ ಆರೋಪ ಗಮನ ಸೆಳೆದಿದೆ.


ಈ ಹಿಂದೆ ಮಂಗಳೂರಿನ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ, ಮೈಸೂರಿನ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರ ಮೇಲೆ ನಡೆದ ದಾಳಿ ಮತ್ತು ಪಾದರಾಯನ ಪುರದಲ್ಲಿ ನಡೆದ ಗಲಾಟೆಯ ಮುಂದುವರಿದ ಭಾಗ ಎಂದು ಶೋಭಾ ಎಚ್ಚರಿಸಿದ್ದಾರೆ . ಅಲ್ಲದೇ ಇದು ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿ ಎಸ್‌ಡಿಪಿಐ ಹಿಡಿತ ಸಾದಿಸಲು ಯತ್ನಿಸುತ್ತಿರುವ ಹುನ್ನಾರ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಮಾಡಿದಂತೆ , ಅಮಾಯಕರ ಮನೆಗಳ ಮೇಲೆ ದಾಳಿ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ ದುಷ್ಕರ್ಮಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ದುಷ್ಕರ್ಮಿಗಳನ್ನು ಜೈಲಿಗಟ್ಟಿದರೆ ಸೂಕ್ತ ಪಾಠ ಕಲಿಸಿದಂತಾಗುತ್ತದೆ ಎಂದು ಅವರು ಸರಕಾರವನ್ನು ಕೇಳಿದ್ದಾರೆ.

 
 
 
 
 
 
 
 
 
 
 

Leave a Reply