ಬೆಂಗಳೂರು: ಕರೊನಾ ಚಿಕಿತ್ಸೆ ಹೆಸರಿನಲ್ಲಿ ರೋಗಿಗಳಿಂದ ವಸೂಲಿಗೆ ದಂಧೆಗಿಳಿದಿರುವ ಕೆಲ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಲು ಸ್ವತಃ ಐಪಿಎಸ್ ಅಧಿಕಾರಿ ಡಿ. ರೂಪಾ ಅವರೇ ಖುದ್ದು ಆಸಕ್ತಿ ವಹಿಸಿದ್ದಾರೆ.
ಬುಧವಾರ ಕರೊನಾ ರೋಗಿಯೊಬ್ಬರಿಗೆ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ 5 ಲಕ್ಷ ರೂ. ಬಿಲ್ ಮಾಡಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಗರಂ ಆದ ಸಚಿವರು, ನಿಗದಿತ ದರಕ್ಕಿಂತಲೂ ರೋಗಿಗಳಿಂದ ಹೆಚ್ಚು ಹಣ ಪಡೆಯುತ್ತಿರುವ ವಿರುದ್ಧ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು. ಕರೊನಾ ರೋಗಿಯೊಬ್ಬರಿಗೆ ಅಪೋಲೋ ಆಸ್ಪತ್ರೆ ಕೊಟ್ಟ 5 ಲಕ್ಷ ರೂ. ಬಿಲ್ನ ಪ್ರತಿಯನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದ ಸಚಿವ ಡಾ.ಕೆ. ಸುಧಾಕರ್, ಆಸ್ಪತ್ರೆಯ ವಸೂಲಿ ದಂಧೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಸಚಿವರ ಟ್ವೀಟ್ ಅನ್ನೇ ರೀ ಟ್ವೀಟ್ ಮಾಡಿಕೊಂಡಿರುವ ಐಪಿಎಸ್ ಅಧಿಕಾರಿ ಡಿ. ರೂಪಾ, ”ಸಾರ್, ನನಗೆ ಹಾಗೂ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಗೆ ಎಲ್ಲ ಆಸ್ಪತ್ರೆಗಳ ಜವಾಬ್ದಾರಿ ಕೊಟ್ಟರೆ, ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿಪಡಿಸಿದಂತೆ ಇದನ್ನೂ ನಿಭಾಯಿಸುತ್ತೇವೆ ಎಂದು ಸಲಹೆ ನೀಡಿದ್ದಾರೆ.






