ಉಡುಪಿ: ಕೊರೋನಾದ ಸಂಕಷ್ಟದ ಕಾಲದಲ್ಲಿ ನಿದ್ದೆಯಲ್ಲಿ ಮುಳುಗಿದ್ದ ಕಾಂಗ್ರೆಸ್ ನಾಯಕರು ಇದೀಗ ಗ್ರಾಮ ಪಂಚಾಯತ್ ಚುನಾವಣೆಯ ಘೋಷಣೆಯಿಂದ ಎದ್ದು ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಾಸಕ್ತಿ ಆಡಳಿತ ಮತ್ತು ಅಭಿವೃದ್ದಿ ಚಟುವಟಿಕೆಗಳಿಂದ ಕಾಂಗ್ರೆಸಿಗರು ಕಂಗೆಟ್ಟಿದ್ದಾರೆ.ಅದರಿಂದ ಸುಖಾಸುಮ್ಮನೆ ಪ್ರತಿಭಟನೆಗಳ ಹೆಸರಲ್ಲಿ ಸರಕಾರದ ಸಾಧನೆಗಳು ಮತ್ತು ಐತಿಹಾಸಿಕ ನಿರ್ಣಯಗಳನ್ನು ವಿರೋಧಿಸುತ್ತಾ ಬಿಜೆಪಿಯ ಕ್ರಿಯಾಶೀಲ ಶಾಸಕರ ಮೇಲೆ ಅನವರತ ಹುರುಳಿಲ್ಲದ ಆರೋಪವನ್ನು ಹೊರಿಸುತ್ತಿದ್ದಾರೆ. ಇದು ಕಾಂಗ್ರೆಸ್ ನ ಭೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ನೂತನ ರೈತ ಮಸೂದೆಯೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ದೇಶದ ರೈತನ ಆದಾಯ ದ್ವಿಗುಣಗೊಳಿಸುವ ಜೊತೆಗೆ ಬೆಂಬಲ ಬೆಲೆಯೊಂದಿಗೆ ರೈತರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಕೃಷಿ ಕಾಯ್ದೆ, ಭೂ ಮಸೂದೆ ಕಾಯ್ದೆ, ಕಾರ್ಮಿಕ ಕಾಯ್ದೆ, ಬಿಪಿಎಲ್ ಕಾರ್ಡು, ನೆರೆ ಪರಿಹಾರ ವಿತರಣೆ, ಕೋವಿಡ್-19 ನಿರ್ವಹಣೆ ಮತ್ತು ಸಹಾಯಧನ ವಿತರಣೆ ಮುಂತಾದ ಸರಕಾರದ ಜನಪರ ಕಾರ್ಯಕ್ರಮಗಳ ಕುರಿತು ಕಾಂಗ್ರೆಸ್ ಸದಾ ಅಪ ಪ್ರಚಾರದಲ್ಲಿ ತೊಡಗಿದ್ದು, ಅಪಪ್ರಚಾರವೇ ಕಾಂಗ್ರೆಸ್ ಪಕ್ಷದ ಜೀವಾಳ ಎಂದು ಸಾಬೀತುಪಡಿಸಿದೆ ಎಂದು ನಾಯಕ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ ನ ಪರಮೋಚ್ಚ ನಾಯಕರೇ ಭ್ರಷ್ಟಾಚಾರದ ಆರೋಪದಲ್ಲಿ ಬೇಲ್ ಮೇಲೆ ತಿರುಗಾಡುತ್ತಿದ್ದು ಅಂತಹ ಕಾಂಗ್ರೆಸ್ ನಾಯಕರಿಗೆ ನಮ್ಮ ಸರಕಾರಗಳು ಮತ್ತು ಬಿಜೆಪಿ ನಾಯಕರುಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಪೆರ್ಣಂಕಿಲ ಶ್ರೀಶ ನಾಯಕ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.