ಆದಿ ಉಡುಪಿಯ ಪ್ರಾಥಮಿಕ, ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾತ್ಯಾಯಿನಿ ಎಂಬ ಶಿಕ್ಷಕಿಯೊಬ್ಬರು ಮಕ್ಕಳಿಗೆ ಪರಿಸರ ಮತ್ತು ಜೀವಜಾಲಗಳ ಬಗ್ಗೆ ಪಾಠ ಮಾಡುತ್ತಿದ್ದರಂತೆ. ಆಗ ವಿದ್ಯಾರ್ಥಿನಿಯೊಬ್ಬಳು ಎದ್ದು ನಿಂತು,”ಟೀಚರ್ ನಮ್ಮ ವಠಾರದ ಬೇಲಿಯ ಬಲೆಗೆ ಎರಡು ಹಾವುಗಳು ಸಿಕ್ಕಿಬಿದ್ದು ಐದು ದಿನಗಳಾದುವು. ದಯವಿಟ್ಟು ಅವುಗಳನ್ನು ರಕ್ಷಿಸಿ…!” ಎಂದಳಂತೆ. ಅಷ್ಟು ಕೇಳಿದ ಅವರು ಕೂಡಲೇ ನನಗೆ ಕರೆ ಮಾಡಿದರು.
ಕಾತ್ಯಾಯಿನಿಯವರಿಗೆ ಜೀವರಾಶಿಗಳ ಮೇಲಿರುವ ಪ್ರೀತಿಯನ್ನು ನಾನು ಸುಮಾರು ಹದಿನೈದು ವರ್ಷಗಳ ಹಿಂದೆ ಇದೇ ಶಾಲೆಯ ಮಾಡಿಗೆ ಬಂದಿದ್ದ ನಾಗರ ಹಾವೊಂದನ್ನು ಹಿಡಿಯುವ ಸಮಯದಲ್ಲಿ ಕಂಡಿದ್ದೆನಾದ್ದರಿಂದ ಕೂಡಲೇ ಹೊರಟೆ.
ಆ ಮನೆಯ ವಠಾರದ ಒಂದು ಮೂಲೆಯ ಆವರಣಕ್ಕೆ ಹಾಕಿದ್ದ ಬಲೆಗೆ ಒಂದು ಗಂಡು, ಒಂದು ಹೆಣ್ಣು ಕೇರೆ ಹಾವುಗಳು ತಮ್ಮ ಕೊರಳನ್ನು ಸಿಲುಕಿಸಿಕೊಂಡು ತೀವ್ರ ಹೋರಾಟ ನಡೆಸುತ್ತ ಸರಾಸರಿ ಐದು ದಿನಗಳ ನರಕ ಯಾತನೆ ಅನುಭವಿಸಿ ಸೋತು ತಟಸ್ಥವಾಗಿದ್ದವು.
“ಅಯ್ಯೋ , ನಾವು ಬಿಡಿಸಲು ಪ್ರಯತ್ನ ಪಟ್ಟೆವು ಸರ್. ಆದರೆ ನಮ್ಮ ಮನೆಯ ಓನರ್, ಅವುಗಳನ್ನು ಮುಟ್ಟಬಾರದು. ಅಲ್ಲೇ ಸಾಯಲಿ ಅವು! ಎಂದು ಬೈದು ಬಿಟ್ಟರು. ಹಾಗಾಗಿ ಅಸಹಾಯಕರಾದೆವು” ಎಂದರು ಬೇಸರದಿಂದ. ನನಗೆ ವಿಚಿತ್ರವೆನಿಸಿತು.
ದಢೂತಿ ಮಹಿಳೆಯೊಬ್ಬರು ಹೊರಗೆ ಬಂದವರು, “ಏನು…?” ಎನ್ನುತ್ತ ಗುರಾಯಿಸಿದರು. ಅವರ ಕಣ್ಣುಗಳನ್ನು ಕಂಡು ಒಂದು ಕ್ಷಣ ಒಳಗೊಳಗೇ ಬೆಚ್ಚಿದೆನಾದರೂ ತೋರಿಸಿಕೊಳ್ಳದೆ, “ನಿಮ್ಮ ಆವರಣದ ಬಲೆಗೆ ಹಾವುಗಳು ಸಿಲುಕಿ 5ದಿನಗಳಾದುವಂತೆ. ಅವುಗಳ ರಕ್ಷಣೆಗೆ ಯಾಕೆ ಪ್ರಯತ್ನಿಸಿಲಿಲ್ಲ ಮೇಡಮ್ ನೀವು?” ಎಂದೆ ಮೃದುವಾಗಿ.
ಅಷ್ಟು ಕೇಳಿದ ಅವರು ನನ್ನನ್ನು ನೋಡಿ ವ್ಯಂಗ್ಯವಾಗಿ ನಗುತ್ತ, ” ಏನು, ರಕ್ಷಣೆ ಮಾಡುವುದಾ…! ಆ ದರಿದ್ರದ ಹಾವುಗಳನ್ನಾ..!? ಅವುಗಳು ವಠಾರದೊಳಗೆಲ್ಲ ಓಡಾಡುತ್ತ ಮಕ್ಕಳು ಮರಿಗಳನ್ನು ಹೆದರಿಸುತ್ತ ಇರುತ್ತವೆ. ಅಂಥ ಜೀವಿಗಳನ್ನು ಎಂಥದು ರಕ್ಷಣೆ ಮಾಡುವುದು? ನಾವು ಸುತ್ತಮುತ್ತ ಕಣ್ಣಿಗೆ ಬೀಳುವ ಬಹಳಷ್ಟು ಹಾವುಗಳನ್ನು ಈಗಾಗಲೇ ಚಚ್ಚಿ ಸಾಯಿಸಿ ಬಿಸಾಡಿದ್ದೇವೆ.
ಆದರೂ ಇತ್ತ, ಆ ಹಾವುಗಳ ಸ್ಥಿತಿಗೆ ಮರುಗಿ ಶಿಕ್ಷಕರಲ್ಲಿ ಬೇಡಿಕೊಂಡ ಆ ಪುಟ್ಟ ಬಾಲಕಿಯ ಮಾನವೀಯತೆಗೂ, ತಕ್ಷಣವೇ ಸ್ಪಂದಿಸಿದ ಶಿಕ್ಷಕಿ ಹಾಗು ಅರಣ್ಯಾಧಿಕಾರಿಗಳ ಜೀವಪ್ರೇಮಕ್ಕೂ ಮನಃಪೂರ್ವಕ ಹಾರೈಕೆಗಳು ಸಲ್ಲಬೇಕು!- ವಿಡೀಯೋ ಕೃಪೆ: ಕಾತ್ಯಾಯಿನಿ ಟೀಚರ್.