ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ 2017-2019 ನೆ ಸಾಲಿನ ಪ್ರಥಮ ರ್ಯಾಂಕ್ ವಿಜೇತೆ ಹಾಗೂ 2018-2020 ನೇ ಸಾಲಿನ ಏಳು ಮಂದಿ ರ್ಯಾಂಕ್ ವಿಜೇತರನ್ನು ಪುರಸ್ಕರಿಸುವ ಕಾರ್ಯಕ್ರಮವನ್ನು ಈಚೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು ಕಾಲೇಜಿನ ಪರಿಸರ,ಶಿಸ್ತಿನ ವಾತಾವರಣ, ಅಧ್ಯಾಪಕ ವೃಂದದ ಮಾರ್ಗದರ್ಶನ, ಉತ್ಕೃಷ್ಟ ಗ್ರಂಥಾಲಯ ಸೇವೆ,ನಿಯತವಾಗಿ ಹಮ್ಮಿಕೊಳ್ಳುವ ಸಹಪಠ್ಯ ಚಟುವಟಿಕೆಗಳು,ಉತ್ಕೃಷ್ಟ ಮಟ್ಟದ ಬೋಧನೆ ಇತ್ಯಾದಿ ಕಾರಕಗಳಿಂದಾಗಿ ತಮಗೆ ಬಿಎಡ್ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತಿ ಸಾಧಿಸಲು ಸಾಧ್ಯವಾಯಿತೆಂದರಲ್ಲದೆ ಹಾಲಿ ವಿದ್ಯಾರ್ಥಿ- ಶಿಕ್ಷಕರು ಅನುಸರಿಸಬೇಕಾದ ಅಧ್ಯಯನ ವಿಧಾನಗಳನ್ನೂ ಸೂಚಿಸಿದರು.ಈ ಪ್ರತಿಭಾವಂತರನ್ನು ಡಾ ಟಿಎಂಎ ಪೈ ಪ್ರತಿಷ್ಠಾನದ ವತಿಯಿಂದ ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.ಸಮಾರಂಭದ ಅಧ್ಯಕ್ಷ ಡಾ ಮಹಾಬಲೇಶ್ವರ ರಾವ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಹಾಗೂ ಅವರಿಗೆ ಬೆಂಬಲ ನೀಡಿದ ಉಪನ್ಯಾಸಕರ ಶ್ರಮವನ್ನು ಕೊಂಡಾಡಿ ನಾವು ಅಲ್ಪ ತೃಪ್ತರಾಗಕೂಡದು, ಉತ್ಕೃಷ್ಟತೆಯ ದಾರಿ ನಿಡಿದಾಗಿದೆ;ಸುಧಾರಣೆಯ ಹಾದಿ ವಿಶಾಲವಾಗಿದೆ ಎಂದು ಕಿವಿಮಾತು ಹೇಳಿದರು.ಶ್ರೀ ಮತಿ ಮಮತಾ ಸಾಮಂತ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಶ್ರೀ ಮತಿ ರೂಪಾ.ಕೆ ಸ್ವಾಗತ ಕೋರಿದರೆ ಶ್ರೀ ಮತಿ ಧನಲಕ್ಷ್ಮೀ ಧನ್ಯವಾದ ಸಲ್ಲಿಸಿದರು. ಶ್ರೀಮತಿಯರಾದ ಪ್ರೀತಿ ಎಸ್ ರಾವ್ ಮತ್ತು ಉಷಾ ಎಚ್ ಸಾಧಕರಿಗೆ ಸ್ಮರಣಿಕೆ ನೀಡಿದರು.