ಉಡುಪಿ: ಎಪಿಎಂಸಿ ಕಾನೂನಿನ ಮೂಲಕ ರೈತ ವಿರೋಧಿ ಕಾನೂನು ತಂದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಇತ್ತ ರಾಜ್ಯದಲ್ಲೂ ಬಿಜೆಪಿ ಸರಕಾರಕ್ಕೆ ರೈತರ ಪರ ಯಾವುದೇ ಕರುಣೆ ಇಲ್ಲ. ಸ್ವತ: ಕೃಷಿ ಸಚಿವ ಬಿ.ಸಿ ಪಾಟೀಲ್, ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳುವ ಮೂಲಕ ಅಹಂಕಾರ ಮೆರೆದಿದ್ದಾರೆ.
ಈ ದೇಶದ ಬೆನ್ನೆಲುಬಾದ ರೈತನಿಗೆ ಬಿಜೆಪಿ ಸರ್ಕಾರ ತನ್ನ ದೌಲತ್ತು ತೋರಿಸುವ ಮೂಲಕ ಅಹಂಕಾರ ಮೆರೆಯುತ್ತಿದೆ ಎಂದು ಉಡುಪಿ ನಗರಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಕೃಷಿ ಸಚಿವ ನಾಗಿ ಕೃಷಿಕರ ಬಗ್ಗೆ ಈ ರೀತಿಯಾಗಿ ಮಾತನಾಡಲು ಬಿ.ಸಿ ಪಾಟೀಲ್ ಗೆ ಶೋಭೆ ತರುವುದಿಲ್ಲ.
ರೈತರ ಪರ ಕಿಂಚಿತ್ತೂ ಕಾಳಜಿ ಇಲ್ಲದ ಬಿಜೆಪಿ ಸರ್ಕಾರದಲ್ಲಿ ಕೃಷಿ ಸಚಿವರ ಹೇಳಿಕೆ ಬಿಜೆಪಿ ಸರಕಾರ ರೈತರ ಪರ ಯಾವ ಧೋರಣೆ ಹೊಂದಿದೆ ಎಂಬುದನ್ನ ತೋರಿಸುತ್ತದೆ. ಇಂತಹ ಹೇಳಿಕೆ ನೀಡಿರುವ ಸಚಿವ ಬಿ.ಸಿ ಪಾಟೀಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.