ಕಲಾಪೋಷಕ ಕುಕ್ಕಿಕಟ್ಟೆ ಸುರೇಶ್ (ಪುಟ್ಟ) ನಿಧನ

ಕುಕ್ಕಿಕಟ್ಟೆಯ ನಿವಾಸಿ ಶ್ರೀಕಲಾ ವಾಣಿಜ್ಯ ಸಂಕೀರ್ಣದ ಮಾಲಕರಾದ ಸುರೇಶ್ (ಪುಟ್ಟ) (೫೦ ವರ್ಷ) ಇಂದು ನಿಧನರಾದರು. ‘ಭ್ರಮರ’ ಕಾಂಟೀನ್ ನಡೆಸುತ್ತಾ ಪಾರಂಪರಿಕ ತಿಂಡಿ-ತಿನಿಸುಗಳನ್ನು ಮಾಡುವಲ್ಲಿ ವಿಶೇಷ ಪ್ರಾವೀಣ್ಯತೆಯನ್ನು ಹೊಂದಿದ್ದರು.

ಕಳೆದ ನಾಲ್ಕು ವರ್ಷಗಳಿಂದ ಸ್ವಂತ ವೇಷಭೂಷಣ ಸಹಿತ ‘ಶ್ರೀಕಲಾ ಸಂಗಮ ಯಕ್ಷಗಾನ ಮಕ್ಕಳ ಮೇಳ’ವನ್ನು ಸ್ಥಾಪಿಸಿ ಎಳೆಯ ಮಕ್ಕಳಲ್ಲಿ ಯಕ್ಷಗಾನಾಸಕ್ತಿ ಮೂಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಯಕ್ಷಗಾನ ಕಲೆಯನ್ನು ಅತೀವ ಪ್ರೀತಿಸುತ್ತಿದ್ದ ಇವರು ಪ್ರತಿವರ್ಷ ವಿಶೇಷ ರೀತಿಯಲ್ಲಿ ಮೇಳದ ಯಕ್ಷಗಾನವನ್ನು ಆಯೋಜಿಸುತ್ತಾ, ಅಂದು ಹಲವಾರು ಅಶಕ್ತರಿಗೆ, ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ, ಯಕ್ಷಗಾನ ಮಂಡಳಿಗಳಿಗೆ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

 
 
 
 
 
 
 
 
 
 
 

Leave a Reply