ಉಡುಪಿ ಶ್ರೀ ಕೃಷ್ಣ ಮಠವನ್ನು ವಶಪಡಿಸಿಕೊಂಡರೆ ಹುಷಾರ್ ಅಂದಿದ್ದ ಮಾಜಿ ಸಚಿವ ಪ್ರಮೋದ್

ಭಾರಿ ಚರ್ಚೆಗೆ ಗ್ರಾಸವಾದ ಪ್ರಮೋದ್ ಮಧ್ವರಾಜ್ ಸ್ಪೋಟಕ ಹೇಳಿಕೆ 
ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಡುಪಿ ಶ್ರೀ ಕೃಷ್ಣ ಮಠವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸುವ ಹುನ್ನಾರದ ವಿಷಯ ಗೊತ್ತಾದಾಗ ನಾನೇ ಸಿದ್ಧರಾಮಯ್ಯ ಬಳಿಗೆ ಹೋಗಿ, ಮಠವನ್ನು ವಶಪಡಿಸಿಕೊಂಡರೆ ಮೊದಲಿಗೆ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಾಯಕರಿಗೆ ಮತ್ತೊಮ್ಮೆ ಇರಿಸುಮುರಿಸು ಉಂಟು ಮಾಡಿದ್ದಾರೆ. 
ಕೃಷ್ಣಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಪ್ರಯುಕ್ತ ನಡೆಯುತ್ತಿರುವ ‘ವಿಶ್ವಾರ್ಪಣಂ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಮಠಕ್ಕೆ ಎಂಟುನೂರು ವರ್ಷಗಳ ಇತಿಹಾಸ ಇದೆ.
ದೇಶವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಮಠ , ಉಡುಪಿ ಜನರಿಗೊಂದು ಭಾಗ್ಯ. ಆದರೆ ಆಗಿನ ನಮ್ಮ ಕಾಂಗ್ರೆಸ್  ಸರಕಾರ ಇದನ್ನು ವಶಪಡಿಸಲು ಮುಂದಾಗಿತ್ತು. ಆಗ ನಾನು ಮಠವನ್ನು ಮುಟ್ಟಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದೆ ಎಂದು ನೆನಪಿಸಿಕೊಂಡರು.
ಈ ವಿಷಯ ನನ್ನ‌ ಒಳಗೇ ಇತ್ತು. ಇದನ್ನು ಹೇಳುವುದಿಲ್ಲ ಎಂದುಕೊಂಡಿದ್ದೆ. ಆದರೆ ಇವತ್ತು ಹೇಳಬೇಕಾಯಿತು ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅಂದಹಾಗೆ ಪ್ರಮೋದ್, ಕಳೆದೆರಡು ವರ್ಷಗಳಿಂದ ಪಕ್ಷದ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದ ಮಾಜಿಸಚಿವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.  
 
 
 
 
 
 
 
 
 
 
 

Leave a Reply