ಉಡುಪಿ: ಕಾಂಗ್ರೆಸ್ ಪಕ್ಷದ ತೀವ್ರ ಒತ್ತಡ ಮತ್ತು ಆಗ್ರಹದ ಪರಿಣಾಮವಾಗಿ ಕೊನೆಗೂ ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ಎರಡನೇ ಅಲೆಯ ಲಾಕ್ದೌನ್ ಪ್ಯಾಕೇಜ್ ಘೋಷಣೆ ಮಾಡಿದ್ದು ಇದರಲ್ಲಿ ಪ್ರಮುಖವಾದ ಹಿಂದುಳಿದ ವರ್ಗ, ಪ್ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತಾಸಕ್ತಿ ಕಾಪಾಡದೇ ನಿರ್ಲಕ್ಷಿಸಿರುವುದು ತೀರಾ ವಿಷಾದನೀಯ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಪ್ರಮುಖ ಹಿಂದುಳಿದ ವರ್ಗಗಳಲ್ಲೊಂದಾದ ಬಿಲ್ಲವ ಸಮುದಾಯದ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಹಣಕಾಸು ನೆರವನ್ನು ನೀಡಿ ಸ್ತ್ರೀ-ಶಕ್ತಿ ಸ್ವ-ಸಹಾಯ ಸಂಘಗಳನ್ನು ಉತ್ತೇಜಿಸುವ ಆಶ್ವಾಸನೆ ಕಾರ್ಯಗತಗೊಂಡಿದ್ದರೆ ಈ ಸಂದರ್ಭದಲ್ಲಿ ಪ್ರಯೋಜನವಾಗುತ್ತಿತ್ತು. ಆದರೆ ಇಂದಿಗೂ ಘೋಷಣೆಯೂ ಆಗದೆ ಕಾರ್ಯಗತವೂ ಆಗದೆ ಕೇವಲ ಆಶ್ವಾಸನೆಯಾಗಿಯೇ ಉಳಿಯುವ ಮೂಲಕ ಹಾಗೂ ಲಾಕ್ದೌನ್ ಪ್ಯಾಕೇಜ್ ನಲ್ಲಿಯೂ ಬಿಲ್ಲವ ಸಮುದಾಯ ವನ್ನು ಕಡೆಗಣಿಸಲಾಗಿದೆ. ತನ್ನ ಜೀವದ ಹಂಗನ್ನು ತೊರೆದು ಜೀವನೋಪಾಯಕ್ಕಾಗಿ ಮೀನುಗಾರಿಕಾ ವೃತ್ತಿಯನ್ನು ನಡೆಸುವ ಮೊಗವೀರರು ಹಾಗೂ ಮೀನು ವ್ಯಾಪಾರ ನಡೆಸುವ ಇತರ ವೃತ್ತಿಭಾಂದವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದೆ ದ್ರೋಹವೆಸಲಾಗಿದೆ.
ಲಾಕ್ ಡೌನ್ ಹಿನ್ನೆಲೆ ಯಾವುದೇ ಶುಭ-ಸಮಾರಂಭಗಳು ನಡೆಯದೇ ಇರುವುದರಿಂದ ದೇವಾಡಿಗ ಸಮುದಾಯದವರು ಯಾವುದೇ ಆದಾಯದ ಮೂಲವಿಲ್ಲದೇ ಸಂಕಷ್ಟದಲ್ಲಿದ್ದರೂ ಸರ್ಕಾರದ ಸಹಾಯ ಇವರಿಗೆ ಇಲ್ಲವಾಗಿದೆ.ತಮ್ಮ ಕುಲ ಕಸುಬನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿರುವ ಕುಂಬಾರ ಸಮಾಜಕ್ಕೆ ಹಾಗೂ ಮರದ ಕೆಲಸ ಮತ್ತು ಕಬ್ಬಿಣದ ಕೆಲಸ ಮಾಡಿ ದುಡಿಮೆ ಮಾಡುತ್ತಿದ್ದ ವಿಶ್ವಕರ್ಮ ಸಮಾಜ ಬಾಂಧವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದಿರುವುದು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತಿದೆ.
ಅದೇ ರೀತಿ ಹಿಂದುಳಿದ ವರ್ಗಗಳ ಜಾತಿಗಳಾದ ಶೆಟ್ಟಿಗಾರ,ಗಾಣಿಗ ಮತ್ತು ಜೋಗಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಾಗೂ ಬೀಡಿ ಕಾರ್ಮಿಕರಿಗೆ ಮತ್ತು ಎಲ್ಲಾ ಸಮಾಜದಲ್ಲಿ ದುಡಿಮೆ ಮಾಡುತ್ತಿರುವವರಿಗೆ ಪ್ಯಾಕೇಜ್ ನೀಡದೆ ಕಡೆಗಣಿಸಲಾಗಿದೆ ಅದೇ ರೀತಿ ದೇವಸ್ಥಾನ, ಗರಡಿಗಳಲ್ಲಿ ಕೆಲಸ ಮಾಡುವ ಅರ್ಚಕರು ಮತ್ತು ಚಾಕರಿ ಮಾಡುವವರನ್ನು ಹಾಗೂ ನಲ್ಕೆಯವರನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಸಹಾಯಧನವನ್ನು ಘೋಷಿಸದೇ ವಂಚಿಸಲಾಗಿದೆ.
ಇದೀಗ ಘೋಷಣೆ ಮಾಡಿರುವ 1,500 – 3,000 ರೂ.ಗಳ ಪ್ಯಾಕೇಜ್ ಇಂದಿನ ದುಬಾರಿಯಾದ ದಿನಸಿ ಸಾಮಾಗ್ರಿ, ಆಡುಗೆ ಆನಿಲದ ಮುಂದೆ ತೀರ ಅತ್ಯಲ್ಪವಾಗಿದ್ದು ಈ ಮೊತ್ತವನ್ನು ಹೆಚ್ಚಿಸಿ ಎಲ್ಲ ಹಿಂದುಳಿದ ವರ್ಗಗಳ ಮತ್ತು ಪ.ಜಾತಿ ಮತ್ತು ಪಂಗಡಗಳ ಜನರಿಗೂ ವಿಸ್ತರಿಸಬೇಕೆಂದು ಸೊರಕೆಯವರು ಆಗ್ರಹಿಸದ್ದಾರೆ. ಮುಖ್ಯಮಂತ್ರಿಗಳು ರೂ.1250 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆಂದು ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ವೈಭವೀಕರಿಸುತಿದು ನೆರೆಯ ಹಾಗೂ ಅತಿ ಸಣ್ಣ ರಾಜ್ಯವಾದ ಕೇರಳದಲ್ಲಿ ರೂ 20000 ಕೋಟಿ ಪ್ಯಾಕೇಜನ್ನು ಜನಸಾಮಾನ್ಯರಿಗೆ ನೀಡಿದ್ದು ಇದನ್ನು ಮುಖ್ಯಮಂತ್ರಿಗಳು ತಿಳಿಯಬೇಕಾಗಿದೆ ಎಂದಿದ್ದಾರೆ.
ಪ್ಯಾಕೇಜ್ ಹಣವನ್ನು ಮುಖ್ಯಮಂತ್ರಿಗಳು ಅಥವಾಸಚಿವರ ಕೈಯಿಂದ ನೀಡುತ್ತಿಲ್ಲ ಇದು ಜನರ ತೆರಿಗೆ ಹಣದಿಂದ ನೀಡುವಂತದ್ದು. ಆದ್ದರಿಂದ ಶೀಘ್ರ ಕಾರ್ಯಗ್ರತಗೊಳಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು. ಪ್ಯಾಕೇಜ್ ಪಡೆಯಲು ನಿಗದಿಪಡಿಸಿರುವ ಅರ್ಹತೆ ಮತ್ತು ನಿಯಮಗಳನ್ನು ಸಡಿಲುಪಡಿಸಬೇಕು ಇಲ್ಲವಾದಲ್ಲಿ ಒಟ್ಟು 10 ಶೇಕಡಾ ಫಲಸನುಭವಿಗಳಿಗೂ ತಮ್ಮ ಪ್ಯಾಕೇಜ್ ತಲುಪುವುದು ಕಷ್ಟಕರ ಎಂದು ಮಾಜಿ ಸಚಿವರು ತಿಳಿಸಿದ್ದಾರೆ. ಎರಡನೇ ಅಲೆಯ ಪ್ಯಾಕೇಜ್ ಕೂಡಾ ಘೋಷಣೆಗಷ್ಟೆ ಸೀಮಿತವಾಗಿರದೆ ರೋಗ ಹತೋಟಿಯೊಂದಿಗೆ ಸಾರ್ವಜನಿಕರ ಹಸಿವು ನೀಗಿಸುವ ಕೆಲಸ ಮಾಡಬೇಕೆಂದು ವಿನಯ್ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.