ಸಿದ್ದರಾಮಯ್ಯನವರ ಹುಟ್ಟುಹಬ್ಬದಲ್ಲಿ ಭಾಗವಹಿಸಿರುವುದು ಕಾಂಗ್ರೆಸಿಗರ ಪಾಲಿಗೆ ಬಯಸದೆ ಬಂದ ಭಾಗ್ಯ- ವೆರೋನಿಕಾ ಕರ್ನೆಲಿಯೊ

ಅಗಸ್ಟ್ 3 ರಂದು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75 ನೇ ವರ್ಷದ ಹುಟ್ಟು ಹಬ್ಬಕ್ಕೆ ಆಯೋಜಕರ ನಿರೀಕ್ಷೆಗೂ ಮೀರಿ ಸೇರಿದ ಜನಸ್ತೋಮ ಪ್ರಸ್ತುತ ಬಿಜೆಪಿ ಸರಕಾರದ ವಿರುದ್ದ ತಮ್ಮ ಅಂತರಾಳದಲ್ಲಿದ್ದ ಆಕ್ರೋಶವನ್ನು ಶಾಂತಿಯುತವಾಗಿ ಪ್ರದರ್ಶಿಸಿದ್ದಾರೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ.

ಸಿದ್ದರಾಮಯ್ಯನವರ ಹುಟ್ಟುಹಬ್ಬದಲ್ಲಿ ಭಾಗವಹಿಸಿರುವುದು ಕಾಂಗ್ರೆಸಿಗರ ಪಾಲಿಗೆ ಬಯಸದೆ ಬಂದ ಭಾಗ್ಯವಾಗಿದ್ದು ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ ನೋಡಿ ಪ್ರತಿಯೊಬ್ಬರು ಬೆರಗಾಗಿದ್ದೇವೆ. ಕಾರ್ಯಕ್ರಮದಲ್ಲಿ ಇದ್ದ ಜನಸ್ತೋಮವನ್ನು ಕಂಡು ಬಿಜೆಪಿ ನಾಯಕರು ಮಾಧ್ಯಮದ ಮೂಲಕ ಅಪಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದ ಮತ್ತು ಅವರ ಚಿಲ್ಲರೆ ರಾಜಕಾರಣವನ್ನು ತೋರಿಸುತ್ತದೆ.

ಲಕ್ಷೋಪಾದಿಯಲ್ಲಿ ಜನ ಸೇರುವ ನಿರೀಕ್ಷೆ ಇದ್ದರೂ ಸಹ ರಾಜ್ಯ ಬಿಜೆಪಿ ಸರಕಾರ ಟ್ರಾಫಿಕ್ ನಿಯಂತ್ರಿಸಲು ಯಾವುದೇ ಪೂರ್ವ ತಯಾರಿ ಮಾಡದಿರುವುದು ಇವರ ಮನಸ್ಥಿತಿಯನ್ನು ತೋರಿಸುತ್ತದೆ. ಟ್ರಾಫಿಕ್ ಸುವ್ಯವಸ್ಥೆಯ ನೆಪದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಸಾವಿರಾರು ವಾಹನಗಳನ್ನು 11 ಕಿ.ಮಿ ದೂರದಲ್ಲಿಯೇ ನಿಲ್ಲಿಸಿ ಹಿಂದೆ ಕಳುಹಿಸಲಾಗಿದೆ. ಈ ರೀತಿ ಟ್ರಾಫಿಕ್ ಪೊಲೀಸರು ಕಿರುಕುಳ ನೀಡಿದರೂ ಜನರು ವಾಹನದಿಂದ ಇಳಿದು ಕಾಲ್ನಡಿಗೆಯ ಮೂಲಕ ಯಾವುದನ್ನು ಲೆಕ್ಕಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೀತಿ ಕಂಡಾಗ ಯಾವ ಮಟ್ಟಿಗೆ ಬಿಜೆಪಿ ಸರಕಾರದ ಆಡಳಿತದ ವಿರುದ್ದ ಜನರ ತಿರುಗಿ ಬಿದ್ದಿದ್ದಾರೆ ಎನ್ನುವುದಕ್ಕೆ ಬಹುದೊಡ್ಡ ಸಾಕ್ಷಿಯಾಗಿದೆ.
ಬಿಜೆಪಿಗರು ಇನ್ನಾದರೂ ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟು ತಮ್ಮ ಉಳಿದ ಕಾಲಾವಧಿಯಲ್ಲಿ ಆದರೂ ಅಧಿಕಾರ ದರ್ಪವನ್ನು ತ್ಯಜಿಸಿ ಆಡಳಿತವನ್ನು ಸುಧಾರಿಸಿ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಇದು ಸಕಾಲ ಎಂದು ಅವರು ಕಿವಿಮಾತು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply