ಸರ್ಕಾರ, ಸಚಿವ ಮುನಿರತ್ನ ವಿರುದ್ಧ ಕಮಿಷನ್ ಆರೋಪ: ಗುತ್ತಿಗೆದಾರ ಕೆಂಪಣ್ಣ ಸೇರಿ‌ ನಾಲ್ವರ ಬಂಧನ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಶೇ.40 ರಷ್ಟು ಭ್ರಷ್ಟಾಚಾರ ಆರೋಪ ಹಾಗೂ ಸಚಿವ ಮುನಿರತ್ನ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿ ನಾಲ್ವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಂಗಳೂರಿನ ಕೇಂದ್ರ ವಿಭಾಗದ ವೈಯಾಲಿಕಾವಲ್ ಠಾಣೆ ಪೊಲೀಸರು ಡಿ. ಕೆಂಪಣ್ಣ ಮತ್ತು ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಖಜಾಂಚಿ ನಟರಾಜ್, ಪದಾಧಿಕಾರಿ ಗುರುಸಿದ್ದಪ್ಪ ಎಂಬುವರನ್ನು ಬಂಧಿಸಿದ್ದಾರೆ.

ಸಚಿವ ಮುನಿರತ್ನ ಈ ನಾಲ್ವರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್ ಮತ್ತು 50 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳಿಗೆ ನೋಟಿಸ್ ಕೊಟ್ಟು ಡಿ.22ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು.

ಆದರೆ, ಡಿ.22ರ ವಿಚಾರಣೆಗೆ ಆರೋಪಿಗಳು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನಗರದ 8ನೇ ಎಸಿಎಂಎಂ ಕೋರ್ಟ್ ಕೆಂಪಣ್ಣ ಸೇರಿ 19 ಮಂದಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆಂಪಣ್ಣ ಸೇರಿ‌ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

 
 
 
 
 
 
 
 
 
 
 

Leave a Reply