ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನವದೆಹಲಿಯಲ್ಲಿ ಸೋಮವಾರ ಸಂಜೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು .
ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಘೋಷಿಸಿದ್ದ ಪದ್ಮವಿಭೂಷಣ ಪ್ರಶಸ್ತಿ ಯನ್ನು ಸ್ವೀಕರಿಸಲು ನವದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಈ ಭೇಟಿ ನಡೆಯಿತು .
ಈ ಸಂದರ್ಭದಲ್ಲಿ ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಮೋದಿಯವರು ಶ್ರೀ ವಿಶ್ವೇಶತೀರ್ಥರನ್ನು ವಿಶೇಷವಾಗಿ ಸ್ಮರಿಸಿದರು .
ರಾಮಮಂದಿರ ನಿರ್ಮಾಣ ಕಾರ್ಯಗಳ ಪ್ರಗತಿಯ ಕುರಿತೂ ಈರ್ವರೂ ಸಮಾಲೋಚನೆಗೈದರು . ನರೇಂದ್ರ ನೋದಿಯವರಿಗೆ ಯಕ್ಷಗಾನದ ಕೇದಗೆ ಮುಂಡಾಸಿನ ಕಿರೀಟ ತೊಡಿಸಿ ಜರತಾರಿ ಶಾಲುಬ, ಬೆಳ್ಳಿಯ ತಟ್ಟೆಯಲ್ಲಿ ಉಡುಪಿ ಶ್ರೀ ಕೃಷ್ಣನ ಗಂಧ , ನಿರ್ಮಾಲ್ಯ ತುಳಸಿ ನೀಡಿ ಆಶೀರ್ವದಿಸಿದರು .
ಉಡುಪಿಯ ಚಿತ್ರಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ಅವರು ರಚಿಸಿದ ಮೋದಿಯವರು ಉಡುಪಿ ಕೃಷ್ಣನಿಗೆ ಕೈಮುಗಿಯುವ ಭಂಗಿಯ ಸುಂದವಾದ ತೈಲಚಿತ್ರ ಹಾಗೂ ಸಂಸ್ಕೃತ , ಕನ್ನಡ , ತುಳು ಲಿಪಿಗಳಲ್ಲಿ ನರೇಂದ್ರ ಮೋದಿಯವರ ಹೆಸರನ್ನು ಕೆತ್ತಿದ ಸ್ಮರಣಿಕೆಯನ್ನೂ ಶ್ರೀಗಳು ಪ್ರಧಾನಮಂತ್ರಿಯವರಿಗೆ ನೀಡಿದರು .
ಈ ಭೇಟಿಯ ಬಗ್ಗೆ ಶ್ರೀಗಳು ಮತ್ತು ಪ್ರಧಾನಮಂತ್ರಿಗಳು ಅತೀವ ಸಂತಸ ವ್ತಕ್ತಪಡಿಸಿದರು .
*ಶೀಘ್ರ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳ ಆಹ್ವಾನ*
ಈ ( ಪ್ರಧಾನ ಮಂತ್ರಿ ಅಧಿಕಾರದ) ಅವಧಿಯಲ್ಲೇ ಉಡುಪಿ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳು ಆಹ್ವಾನಿಸಿದರು . ಖಂಡಿತ ಬಂದೇ ಬರ್ತೇನೆ ಚಿಂತೆ ಬೇಡ ಎಂದು ಮೋದಿಯವರು ತುಂಬ ಹರ್ಷದಿಂದಲೇ ತಿಳಿಸಿದರು .
ಇದೇ ಸಂದರ್ಭದಲ್ಲಿ , *ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸುವುದು , *ದೇಶಾದ್ಯಂತ ಹಿಂದೂ ಶ್ರದ್ಧಾಕೇಂದ್ರಗಳನ್ನು ಸರ್ಕಾರಿ ವ್ಯವಸ್ಥೆಯಿಂದ ಸ್ವಾಯತ್ತಗೊಳಿಸುವುದು , *ಮಹರ್ಷಿ ವೇದವ್ಯಾಸರ ಜಯಂತಿಯನ್ನು (ಆಷಾಢ ಪೂರ್ಣಿಮಾ ಅಥವಾ ಒಂದು ನಿರ್ದಿಷ್ಟ ದಿನಾಂಕವನ್ನು ) ” ತತ್ತ್ವಜ್ಞಾನ ದಿನ ” ಅಥವಾ ” ಅಧ್ಯಾತ್ಮ ದಿನ ” ಎಂದು ಘೋಷಿಸಿ ಸರ್ಕಾರಿ ಆಚರಣೆಗೆ ವ್ಯವಸ್ಥೆಗೊಳಿಸುವುದು ,
ಹಾಗೂ ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆ ಗೊಳಿಸುವುದು ಎಂಬ ನಾಲ್ಕು ಅಪೇಕ್ಷೆಗಳನ್ನು ಲಿಖಿತವಾಗಿ ನೀಡಿದರು . ಈ ಬಗ್ಗೆಯೂ ಗಮನಹರಿಸುವುದಾಗಿ ಮೋದಿಯವರು ತಿಳಿಸಿದರು .
ಶ್ರೀ ಪೇಜಾವರ ಮಠದ ದಿವಾನರಾದ ಎಂ ರಘುರಾಮಾಚಾರ್ಯ , ಡಿ ಪಿ ಅನಂತ್ , ಸಾಮಾಜಿಕ ಕಾರ್ಯಕರ್ತ ಶ್ರೀಗಳ ಆಪ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು .