ಶೋಭಾ ಕರಂದ್ಲಾಜೆ ಯವರೇ,ನೀವು ಹಿಂದೂಗಳಿಗೆ ಮಾತ್ರ ಸಂಸದರಾ?- ಗೀತಾ ವಾಗ್ಳೆ

ಉಡುಪಿ: ಸಂಸದೆ ಆದಾಗಿನಿಂದಲೂ ಅನ್ಯಧರ್ಮೀಯರನ್ನು ಕೆಣಕುವುದನ್ನೇ ಹವ್ಯಾಸವನ್ನಾಗಿಸಿಕೊಂಡಿರುವ ಶೋಭಾ ಕರಂದ್ಲಾಜೆಯವರೇ,ತಾವು ಎರಡೆರಡು ಬಾರಿ ಈ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿದ್ದು ತಾವು ಕೇವಲ ಹಿಂದೂಗಳಿಗೆ ಮಾತ್ರ ಸಂಸದೆಯಾಗಿಲ್ಲ ಎನ್ನುವುದನ್ನು ಮರೆಯಬೇಡಿ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಕೊರೋನಾ ಲಸಿಕೆ ಕುರಿತು ಚರ್ಚ್ ಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆಯ ಆರೋಪದ ಹಿನ್ನಲೆಯಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗಿರುವ ಬೆನ್ನಲ್ಲೇ ಇದೀಗ ಮತ್ತೆ ಈ ಆರೋಪಕ್ಕೆ ತಾನು ಬದ್ಧ ಎಂಬ ಮಗದೊಂದು ಹೇಳಿಕೆಯನ್ನು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇದಕ್ಕೆ ವಿರೋಧವಾಗಿ ಒಂದು ಜವಾಬ್ದಾರೀ ಹುದ್ದೆಯಲ್ಲಿದ್ದುಕೊಂಡು ಯಾವುದೇ ಆಧಾರಗಳಿಲ್ಲದೇ ಒಂದು ಸಮುದಾಯದ ಮೇಲೆ ಆರೋಪವನ್ನು ಹೊರಿಸುವುದು ತಮಗೆ ಶೋಭೆ ತರುವಂತಹುದಲ್ಲ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಹೇಳಿದ್ದಾರೆ.ಅದರಲ್ಲೂ ಇಂತಹ ಕಠಿಣ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಒಂದು ಭಾಗವಾಗಿ ತಾವು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸುವುದರೊಂದಿಗೆ ಸಮಸ್ಯೆಗೆ ಸೌಹಾರ್ದತೆಯಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕಿತ್ತು.

ಅದನ್ನು ಬಿಟ್ಟು ತಮ್ಮಸರಕಾರದ ತಪ್ಪುಗಳನ್ನು ಮರೆಮಾಚಲು ಚರ್ಚ್ ಗಳತ್ತ ಬೆಟ್ಟು ಮಾಡಿರುವುದು ಹೇಸಿಗೆ ತರಿಸುತ್ತಿದೆ.ಒಂದು ವೇಳೆ ಚರ್ಚ್ ಗಳಲ್ಲಿ ಇಂತಹ ಒಂದು ಘಟನೆ ನಡೆದದ್ದೇ ನಿಜವೆಂದಾದರೆ ತಾವು ಹೋಗಿ ಜನರಿಗೆ ಲಸಿಕೆಯ ಮಹತ್ವದ ಬಗ್ಗೆ ತಿಳಿಹೇಳಬಹುದಿತ್ತಲ್ಲವೇ? ಒಬ್ಬ ಸಂಸದರು ಚರ್ಚ್ ಗೆ ಭೇಟಿ ಕೊಡುವವರಿದ್ದಾರೆ ಎಂದರೆ ಯಾರೂ ತಮ್ಮನ್ನು ತಡೆಯುವ ಧೈರ್ಯ ಮಾಡಲಿಕ್ಕಿಲ್ಲ.ಹೀಗಿರುವಾಗ ಯಾವಾಗಲೂ ಮುಸ್ಲೀಮರ ಬಗ್ಗೆ, ಕ್ರೈಸ್ತರ ಬಗ್ಗೆ ತಾವು ಇಂತಹ ಬಾಲಿಶ ಹೇಳಿಕೆಯನ್ನು ನೀಡಿ ಜನರಲ್ಲಿ ತಮ್ಮ ಬಗ್ಗೆ ಇದ್ದ ಅಲ್ಪಸ್ವಲ್ಪ ಗೌರವವನ್ನೂ ಕಳೆದುಕೊಂಡಿದ್ದೀರಿ.

 ಲೆಕ್ಕವಿಲ್ಲದಷ್ಟು ವಿದ್ಯಾಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಹಾಗೂ ದೀನದಲಿತರಿಗಾಗಿ ಆಶ್ರಯ ಧಾಮಗಳನ್ನು ನಾಡಿನಲ್ಲಿ ತೆರೆಯುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮಾತನಾಡುವುದನ್ನು ಇನ್ನಾದರೂ ಬಿಟ್ಟು ಬಿಡಿ.ದರ್ಪ, ರೋಷಗಳನ್ನು ಬಿಟ್ಟು ನಿಮ್ಮನ್ನು ಆರಿಸಿರುವ ಮತದಾರರೊಂದಿಗೆ ನಯ ವಿನಯದಿಂದ ಮಾತನಾಡುವುದನ್ನು ರೂಢಿ ಮಾಡಿಕೊಳ್ಳಿ.ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಕಾಲಿನ ಮೇಲೆ ತಾವೇ ಕೊಡಲಿಯನ್ನು ಎತ್ತಿ ಹಾಕಿದಂತೆ ಆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ದಿನಗಳು ದೂರವೇನಿಲ್ಲ .ಮೊದಲಿನಿಂದಲೂ ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಮೂಲಕ ಬದುಕುತ್ತಿರುವ ಆ ಸಮುದಾಯದ ಜನರ ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನ ಮಾಡಬೇಡಿ ಎಂದು ಗೀತಾ ವಾಗ್ಳೆ ಹೇಳಿದ್ದಾರೆ.

 
 
 
 
 
 
 
 
 
 
 

1 COMMENT

  1. ಆದರೂ ಶೋಭಾ ಕರಂದ್ಲಾಜೆ ಯವರಿಗೆ ಹಿಂದೂಗಳನ್ನುಳಿದು ಅನ್ಯ ಧರ್ಮದವರು ಓಟು ಹಾಕಿರಲಿಕ್ಕಿಲ್ಲ ಅಲ್ಲವೇ…!!!!???
    (ಮುಂದೆಯೂ ಹಾಕಲಾರರು)

Leave a Reply