ಮೊಟ್ಟೆ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಉಡುಪಿ : ಗರ್ಭಿಣಿಯರು ಮತ್ತು ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಸರಕಾರವು ಮಾತೃಪೂರ್ಣ ಯೋಜನೆಯಡಿ ನೀಡುತ್ತಿರುವ ಮೊಟ್ಟೆ ಖರೀದಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಇಂದು ಉಡುಪಿಯ ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಹಿಳೆಯರು ಕೈಯಲ್ಲಿ ಮೊಟ್ಟೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರು ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆಯಿಂದಾಗಿ ಅನಿವಾರ್ಯವಾಗಿ ಶಶಿಕಲಾ ಜೊಲ್ಲೆ ತಮ್ಮ ಸಚಿವ ಸ್ಥಾನದಿಂದ ಕೆಳಗಿಳಿಯಲೇ ಬೇಕಾಗಿದೆ.ಆದರೆ ಅವರು ಮಾಡಿರುವ ಭ್ರಷ್ಟಾಚಾರವನ್ನು ನಾವು ಮರೆಯುವ ಪ್ರಶ್ನೆಯೇ ಇಲ್ಲ.ಮುಂದಿನ ಮುಖ್ಯಮಂತ್ರಿ ಯಾರೇ ಆಗಲಿ,ಈ ವಿಚಾರದಲ್ಲಿ ತನಿಖೆ ನಡೆಯಲೇ ಬೇಕು.ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.

ಅಮೃತ್ ಶೆಣೈ ಮಾತನಾಡಿ ಬಿಜೆಪಿ ಪಕ್ಷ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು.ಉಡುಪಿ ಶಾಸಕರ ಮರಳು ಹಗರಣ,ಕಾರ್ಕಳದ ಸಿಮೆಂಟ್ ಹಗರಣದಿಂದ ಹಿಡಿದು ರಾಷ್ಟ್ರ ಮಟ್ಟದ ವರೆಗೂ ಭ್ರಷ್ಟಾಚಾರಿಗಳೇ ಆ ಪಕ್ಷದಲ್ಲಿ ತುಂಬಿದ್ದಾರೆ.ಸಿದ್ಧರಾಮಯ್ಯ ಮುಖ್ಯಮಂತ್ರಿ ಗಳಾಗಿದ್ದ ಐದು ವರ್ಷಗಳಲ್ಲಿ ಒಂದೇ ಒಂದು ಆರೋಪ ಅವರ ಮೇಲೆ ಬಂದಿರಲಿಲ್ಲ.ಆದರೆ ಯಡಿಯೂರಪ್ಪ ನವರು ಅಧಿಕಾರಕ್ಕೆ ಬಂದಾಗಲೆಲ್ಲ ಒಂದಲ್ಲ ಒಂದು ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದೂ ಅಷ್ಟೇ ಸತ್ಯ ಎಂದರು.

ಶಶಿಕಲಾ ಜೊಲ್ಲೆ ಮಹಿಳೆಯಾಗಿ ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡುವಂತಹ ಮೊಟ್ಟೆ ಖರೀದಿಯಲ್ಲಿ ಕೂಡಾ ದುಡ್ಡು ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧ.ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಮಾಡಿದ್ದುಣ್ಣೋ ಮಹಾರಾಯ ಎನ್ನುವಂತೆ ಬಿಜೆಪಿಯವರು ತಾವು ತೋಡಿದ ಹಳ್ಳದಲ್ಲಿ ತಾವೇ ಬೀಳುವ ಪರಿಸ್ಥಿತಿ ಬಂದಿದೆ.ಗರ್ಭಿಣಿಯರು ಮತ್ತು ಮಕ್ಕಳು ತಿನ್ನುವ ಮೊಟ್ಟೆಯಲ್ಲೂ ಕೋಟಿ ಕೋಟಿ ಲೂಟಿ ಮಾಡಲು ಹೊರಟಿದ್ದ ಶಶಿಕಲಾ ಜೊಲ್ಲೆಯವರಿಗೆ ದೇವರು ಅಧಿಕಾರದಲ್ಲಿರಲು ಬಿಡದೇ ಕೆಳಗಿಳಿಸಿದ್ದಾರೆ ಎಂದು ಹೇಳಿದರು.

ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ,ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಾಮ್ಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ,ಸಾಮಾಜಿಕ ಜಾಲತಾಣದ ಮಾಜಿ ಸಹ ಸಂಚಾಲಕ ಪ್ರಭಾಕರ ಆಚಾರ್ಯ,ಗಣೇಶ್ ನೆರ್ಗಿ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಆಚಾರ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಖಜಾಂಚಿ ಆಗ್ನೆಸ್ ಡೇಸಾ, ಉಪಾಧ್ಯಕ್ಷೆ ಐರಿನ್ ಅಂದ್ರಾದೆ, ಸದಸ್ಯೆ ಸುಗುಣ ಪೂಜಾರ್ತಿ,ಐರಿನ್ ತಾವ್ರೋ ಮುಂತಾದವರು ಉಪಸ್ಥಿತರಿದ್ದರು.ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪ್ರಭಾ ಶೆಟ್ಟಿ ವಂದಿಸಿದರು.

ಪಕ್ಷದ ನಾಯಕ ಆಸ್ಕರ್ ಫೆರ್ನಾಂಡಿಸ್ ತೀವ್ರ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಯಲ್ಲಿರುವುದರಿಂದ ಈ ಪ್ರತಿಭಟನೆಯನ್ನು ಸರಳವಾಗಿ ಹಾಗೂ ಸಾಂಕೇತಿಕವಾಗಿ ನಡೆಸಲಾಗಿದ್ದು ಅವರು ಆರೋಗ್ಯಕ್ಕಾಗಿ ಪ್ರಾರ್ಥಿಸಲಾಯಿತು.

 
 
 
 
 
 
 
 
 
 
 

Leave a Reply