ಕೋವಿಡ್ ಲಸಿಕಾ ಅಭಿಯಾನಕ್ಕೆ 100ಕೋಟಿ ರೂ. ನೀಡುವ ಕಾಂಗ್ರೆಸ್ ನಿರ್ಣಯ ಸ್ವಾಗತಾರ್ಹ: ಅಶೋಕ್ ಕೊಡವೂರು

ಉಡುಪಿ: ರಾಜ್ಯದ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರ ವಿಧಾನ ಪರಿಷತ್ ಸದಸ್ಯರ, ಸಂಸದರ ಕ್ಷೇತ್ರಾಭಿವೃದ್ದಿ ನಿಧಿ ಹಾಗೂ ಕೆ.ಪಿ.ಸಿ.ಸಿ.ಯ ನೇರ ಆರ್ಥಿಕ ಸಹಯೋಗದೊಂದಿಗೆ 100 ಕೋಟಿ ರೂ. ಕೋವಿಡ್ ಲಸಿಕೆಗಾಗಿ ನೆರವು ನೀಡಲಿದೆ.ಆರೋಗ್ಯ ತುರ್ತು ಸ್ಥಿತಿಯ ಈ ಸಂದರ್ಭದಲ್ಲಿ ಜನ ಸೇವೆಯ ಕೈಂಕರ್ಯಕ್ಕೆ ಇದು ಅನ್ಯ ಪಕ್ಷಗಳಿಗೆ ಸ್ಪೂರ್ತಿಯಾಗಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಇಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ರಾಜ್ಯ ಸರಕಾರ ಲಸಿಕೆ ನೀಡುವಲ್ಲಿ ಸಂಪೂರ್ಣ ಎಡವಿದೆ. ಲಸಿಕೆಗಳ ಬಗ್ಗೆ ಸರಕಾರ ದಿನಕ್ಕೊಂದು ನೀತಿ ನಿಯಮ ರೂಪಿಸುತ್ತಿರುವ ಬಗ್ಗೆ ಜನರು ರೋಸಿ ಹೋಗಿದ್ದಾರೆ.ಬಿಜೆಪಿ ತನ್ನ ಮಾನ ಉಳಿಸಿಕೊಳ್ಳಲು ಎಂದಿನಂತೆ ಈ ವೈಪಲ್ಯವನ್ನು ಕಾಂಗ್ರೆಸ್ ಪಕ್ಷದ ತಲೆಗೆ ಕಟ್ಟಲು ನೋಡುತ್ತಿದೆ. ಆದರೆ ರಾಜ್ಯದ ಜನತೆಗೆ ಇವರ ಬೇಜವಾಬ್ಧಾರಿಯ ಅರಿವಾಗಿದೆ.ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಜನತೆಯ ನಾಡಿಮಿಡಿತವನ್ನು ಅರಿತು ಮಾತಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕೊರೋನಾದಿಂದ ಜನ ಸಾಯುತ್ತಿದ್ದಾರೆ. ದೇಶದ ಆರೋಗ್ಯ ತುರ್ತು ಸ್ಥಿತಿಯ ಇಂತಹ ಸಂಕಷ್ಟದ ಸಮಯದಲ್ಲಿ ಕೋವಿಡ್- 19 ಸಂಬಂಧಪಟ್ಟ ಜೀವರಕ್ಷಕ ಔಷಧ, ಲಸಿಕೆಗಳ ಮೇಲೆ ಶೇ. 18 ಜಿಎಸ್ಟಿ ಈ ಸರಕಾರ ಹಾಕುತ್ತಿದೆ. ಇದೀಗ ಮತ್ತೆ ಪೆಟ್ರೋಲ್ ಡೀಸಿಲ್ ಬೆಲೆ ಏರಿಸಿ ಕಷ್ಟದಲ್ಲಿರುವ ಜನರ ಮೇಲೆ ಮತ್ತೆ ಬರೆ ಎಳೆದು ಬದುಕು ದುಸ್ತರ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply