ಪಿಎಫ್​ಐ ಪ್ರತಿಭಟನೆಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಕೋರ್ಟ್

ತಿರುವನಂತಪುರ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳ ಮೇಲೆ ಎನ್‌ಐಎ ದಾಳಿಯನ್ನು ಖಂಡಿಸಿ ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕೇರಳದಲ್ಲಿ ಬಂದ್‌ಗೆ ಕರೆ ನೀಡಿದೆ. ಈ ಕ್ರಮಕ್ಕೆ ಕೇರಳ ಹೈಕೋರ್ಟ್
ಕೆಂಡಾಮಂಡಲವಾಗಿದೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪಿಎಫ್‌ಐ ಸಂಘಟನೆಗಳು ಇಸ್ಲಾಂ ಧರ್ಮದ ತೀವ್ರವಾದಿ ಸಂಘಟನೆಗಳಾಗಿವೆ. ಆದರೆ ಈ ಸಂಘಟನೆಗಳನ್ನು ಏಕೆ ಈವರೆಗೆ ನಿಷೇಧಿಸಲಾಗಿಲ್ಲ ಎಂದು ಕಳೆದ ಮೇ ತಿಂಗಳಿನಲ್ಲಿ
ವಿಚಾರಣೆಯೊಂದರ ವೇಳೆ ಕೇರಳ ಹೈಕೋರ್ಟ್‌ ಪ್ರಶ್ನಿಸಿತ್ತು. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇವುಗಳ ಮೇಲೆ ನಡೆಸಿರುವ ದಾಳಿಗೆ ಸಂಬಂಧಿಸಿದಂತೆ ನಡೆಸುತ್ತಿದ್ದ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇದೀಗ ಪಿಎಫ್‌ಐ ಪ್ರತಿಭಟನೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಕೋರ್ಟ್ ದೂರು ದಾಖಲಿಸಿಕೊಂಡು, ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದೆ. ‘ಯಾರೂ ಅನುಮತಿಯಿಲ್ಲದೆ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಇದಾಗಲೇ ಹಲವು ತೀರ್ಪುಗಳಲ್ಲಿ ಕೋರ್ಟ್‌ಗಳು ಹೇಳುತ್ತಲೇ ಬಂದಿವೆ. ಹೀಗಿರುವಾಗ ಪಿಎಫ್‌ಐ ಹೇಗೆ ಪ್ರತಿಭಟನೆ ಮಾಡಿ ಬಂದ್‌ಗೆ ಕರೆ ನೀಡಿದೆ’ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ‘ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿರುವ ಈ ಸಂಘಟನೆ ಈಗ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ
ಎ.ಕೆ.ಜಯಶಂಕರನ್ ನಂಬಿಯಾರ್ ನೇತೃತ್ವದ ಪೀಠ ಹೇಳಿದೆ.

‘ಪಿಎಫ್‌ಐ ಮತ್ತು ಎಸ್‌ಡಿಪಿಐ ದೇಶಾದ್ಯಂತ ತೀವ್ರವಾದದ ಸಿದ್ಧಾಂತಗಳನ್ನು ಪ್ರಚುರ ಮಾಡುವುದರಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಾಗಿವೆ. ಈ ಸಂಘಟನೆಗಳು ಭಾರತದ ಹೊರಗೆ ಸಹ ಬೇರುಗಳನ್ನು ಹೊಂದಿವೆ. ದಬ್ಬಾಳಿಕೆ ಮತ್ತು ಬೆದರಿಕೆಯ ಮೂಲಕ
ಅವರು ಇತರ ಸಮುದಾಯದ ಜನರನ್ನು ಇಸ್ಲಾಂಗೆ ಮತಾಂತರಿಸುವಲ್ಲಿ ತೊಡಗಿದ್ದಾರೆ’ ಎಂದು ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ. ಹರಿಪಾಲ್ ಅಭಿಪ್ರಾಯಪಟ್ಟಿದ್ದರು.

 
 
 
 
 
 
 
 
 
 
 

Leave a Reply