ಶ್ರೀ ವಿಶ್ವೇಶತೀರ್ಥ ಸ್ಮರಣಾರ್ಥ ಸ್ಮೃತಿ ವನಕ್ಕೆ ಭೂಮಿ ಪೂಜೆ

ಶ್ರೀ ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ ಕೀರ್ತಿಶೇಷ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸ್ಮರಣಾರ್ಥ ಉಡುಪಿ ಜಿಲ್ಲೆಯ ನೀಲಾವರ ಗ್ರಾಮದಲ್ಲಿ ( ಗೋಶಾಲೆ ಸಮೀಪ ) ನಿರ್ಮಾಣವಾಗಲಿರುವ ಸ್ಮೃತಿ ವನಕ್ಕೆ ಭೂಮಿ ಪೂಜಾ ಕಾರ್ಯಕ್ರಮವು ಇದೇ ಬರುವ ಮೇ 7 ನೇ ತಾರೀಖು ಶನಿವಾರ ಮುಂಜಾನೆ 9.30 ಕ್ಕೆ ನಡೆಯಲಿದೆ .‌

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದ್ದು
ರಾಜ್ಯದ ಅರಣ್ಯ ಮಂತ್ರಿಗಳಾದ ಶ್ರೀ ಉಮೇಶ ವಿ ಕತ್ತಿಯವರು ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು ಶಿಲಾನ್ಯಾಸ ನೆರವೇರಿಸುವರು . ಉಡುಪಿ ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸುವರು . ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಮಂತ್ರಿ ಶೋಭಾ ಕರಂದ್ಲಾಜೆ , ಸಚಿವರುಗಳಾದ ಎಸ್ ಅಂಗಾರ , ಕೋಟ ಶ್ರೀನಿವಾಸ ಪೂಜಾರಿ , ವಿ ಸುನಿಲ್ ಕುಮಾರ್ ,ರಾಜ್ಯ ಪಶ್ಚಿಮ ಘಟ್ಟ ಮತ್ತು ಜೈವಿಕ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ , ಮಟ್ಟಾರ್ ರತ್ನಾಕರ ಹೆಗ್ಡೆ , ನೀಲಾವರ ಗ್ರಾ ಪಂ ಅಧ್ಯಕ್ಷ ಮಹೇಂದ್ರ ಕುಮಾರ್ , ಜಿಲ್ಲಾಧಿಕಾರಿ ಕೂರ್ಮ ರಾವ್ ಸೇರಿಂದಂತೆ ವಿವಿಧ ಜನಪ್ರತಿನಿಧಿಗಳು , ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರುವರು .‌
ಭೂಮಿ ಪೂಜೆಯ ಬಳಿಕ ಸಭಾ ಕಾರ್ಯಕ್ರಮವು ಗೋಶಾಲೆಯ ಸಭಾಂಗಣದಲ್ಲಿ ನಡೆಯಲಿದೆ .‌

ಸನ್ಮಾನ್ಯ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ತುಮಕೂರಿನ ಡಾ ಸಿದ್ಧಗಂಗಾ ಸ್ವಾಮೀಜಿಯವರ ಹೆಸರಲ್ಲಿ ಸ್ಮೃತಿ ವನ ನಿರ್ಮಾಣಕ್ಕಾಗಿ ತಲಾ ಎರಡು ಕೋಟಿ ರೂಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದರು .‌
ನಂತರ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು , ಅರಣ್ಯ ಮಂತ್ರಿ ಉಮೇಶ ಕತ್ತಿಯವರು ಹಾಗೂ ಶಾಸಕ ರಘುಪತಿ ಭಟ್ಟರು ವಿಶೇಷ ಮುತುವರ್ಜಿ ವಹಿಸಿದ್ದರಿಂದ ಇದೀಗ ಅರಣ್ಯ ಇಲಾಖೆಯ ಮೂಲಕ ಇದರ ಅನುಷ್ಠಾನವಾಗುತ್ತಿದೆ .

ಗೋಶಾಲೆ ಸಮೀಪವೇ ಭೂಮಿ ಲಭಿಸಿತು!!! : ಬಹಳ ಅಚ್ಚರಿಯ ಸಂಗತಿ ಎಂದರೆ ಇದಕ್ಕೆ ಅವಶ್ಯವಿದ್ದ ಭೂಮಿಗಾಗಿ ಅರಣ್ಯ ಇಲಾಖೆ ಜಿಲ್ಲೆಯ ಕೆಲವೆಡೆ ಸರ್ಕಾರಿ ಭೂಮಿ ಹುಡುಕಾಟದಲ್ಲಿತ್ತು . ಆದರೆ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಇದು ನೀಲಾವರ ಗೋಶಾಲೆಯ ಆಸುಪಾಸಿನಲ್ಲೇ ಆದರೆ ಗೋಶಾಲೆಯನ್ನು ನೋಡಲು ಬರುವವರಿಗೆ ಸ್ಮೃತಿ ವನವೂ ಪ್ರೇಕ್ಷಣೀಯ ಸ್ಥಳವಾಗ್ತದೆ . ಮತ್ತು ನಿರ್ವಹಣೆಯೂ ಸುಲಭವಾಗ್ತದೆ ಎಂಬ ಯೋಚನೆ ಇತ್ತು . ಅಚ್ಚರಿ ಎಂದರೆ ಗುರುಗಳ ಚಿಂತನೆಯಂತೆ ನೀಲಾವರ ಗೋಶಾಲೆಗೆ ತಾಗಿಕೊಂಡೇ ಇರುವ ಎರಡು ಎಕ್ರೆ ಸರ್ಕಾರಿ ಭೂಮಿಯೇ ಒದಗಿ ಬಂತು ..!!

ಈ ಬಗ್ಗೆ ಸುಂದರವಾದ ನೀಲನಕಾಶೆ ಸಿದ್ಧವಾಗಿದ್ದು ಈ ಸ್ಮೃತಿ ವನಕ್ಕೆ ಸುಂದರ ಮುಖದ್ವಾರ ಮಧ್ಯಭಾಗದಲ್ಲಿ ಶ್ರೀ ವಿಶ್ವೇಶತೀರ್ಥರ ಕುಳಿತ ಭಂಗಿಯ ಹತ್ತು ಅಡಿ ಎತ್ತರದ ಕಂಚಿನ ಪ್ರತಿಮೆ , ಅದರ ಮುಂಭಾಗ ಪ್ರವಚನ ವಿಚಾರಗೋಷ್ಠಿ ಇತ್ಯಾದಿ ನಡೆಸಲು ಅನುಕೂಲವಾಗುವಂತೆ ಒಂದು ವೇದಿಕೆ , ಹಿಂಭಾಗದಲ್ಲಿ ಗ್ರೀನ್ ರೂಮ್ , ಇದರ ಸುತ್ತಲೂ ಪ್ರೇಕ್ಷಕರು ಕುಳಿತು ಕೊಳ್ಳಲು ಸ್ಟೇಡಿಯಂ ರೀತಿ ಮೆಟ್ಟಿಲುಗಳು , ವಾಕಿಂಗ್ ಟ್ರ್ಯಾಕ್ , ಗ್ಯಾಲರಿ ಮತ್ತು ಉಳಿದಂತೆ ಮಕ್ಕಳ ಆಟದ ವಿಭಾಗ , ನಾಲ್ಕು ಕಡೆಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಕುಟೀರಗಳು ಮತ್ತು ಔಷಧೀಯ ಸಸ್ಯಗಳು ಹೂವಿನ ಹಾಗೂ ಹಣ್ಣಿನ ಮರಗಳುಳ್ಳ ವನ ನಿರ್ಮಾಣವಾಗಲಿದೆ .‌ ಸ್ವಾಮೀಜಿಯವರ ಸೂಚನೆಯಂತೆ ಈಗ ಇರುವ ಮರಗಳು ಮತ್ತು ಪ್ರಾಕೃತಿಕ ಪರಿಸರವನ್ನು ಗರಿಷ್ಟ ಮಟ್ಡದಲ್ಲಿ ಉಳಿಸಿಕೊಂಡು ಅಕೇಶಿಯಾ ಮೊದಲಾದ ಅನವಶ್ಯಕ ಮರಗಳನ್ನು ತೆರವುಗೊಳಿಸಿ ಅಗತ್ಯ ಇರುವಷ್ಟು ಮಾತ್ರ ನಿರ್ಮಿತಿಗಳನ್ನು ಕರಾವಳಿಯ ಶೈಲಿಯಲ್ಲಿ ನಿರ್ಮಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ .

ಉಡುಪಿ ಜಿಲ್ಲೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರ ಭಾಗದಲ್ಲಿ ಈ ಸ್ಮೃತಿ ವನ ಒಂದು ಪ್ರೇಕ್ಷಣೀಯ ಸ್ಥಳವಾಗಿ ಮೂಡಿ ಬರಲಿದೆ .‌ಜಿಲ್ಲೆಯ ಪ್ರವಾಸೋದ್ಯಮದ ನೆಲೆಯಲ್ಲೂ ಸರ್ಕಾರದಿಂದ ಮಹತ್ವದ ಕೊಡುಗೆಯಾಗುತ್ತಿದೆ .

7 ರಂದು ಗೋಶಾಲೆಯಲ್ಲಿ ಅಶ್ವತ್ಥ ವಿವಾಹ : ಸ್ಮೃತಿವನದ ಶಿಲಾನ್ಯಾಸ ದಿನವೇ ಮುಂಜಾನೆ ಗೋಶಾಲೆ ಆವರಣದಲ್ಲಿರುವ ಅಶ್ವತ್ಥ ವೃಕ್ಷಕ್ಕೆ ಭಕ್ತರೊಬ್ಬರ ಸೇವಾರ್ಥ ಉಪನಯನ ಮತ್ತು ವಿವಾಹ ವಿಧಿಗಳು ನಡೆಯುತ್ತಿರುವುದು ತೀರಾ ಕಾಕತಾಳೀಯವೂ ಆಗಿದೆ .

ಗೋಷ್ಠಿಯಲ್ಲಿರುವವರು
ದಿವಾನರಾದ ಎಂ ರಘುರಾಮಾಚಾರ್ಯ
ಮಠದ ಸಿ ಇ ಒ ಸುಬ್ರಹ್ಮಣ್ಯ ಭಟ್ ಸಗ್ರಿ
ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ .
ನೀಲಾವರ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್
ವಾಸುದೇವ ಭಟ್ ಪೆರಂಪಳ್ಳಿ

 
 
 
 
 
 
 
 
 
 
 

Leave a Reply