ಪಣಿಯಾಡಿ ದೇವಳದಲ್ಲಿ ಕುಂಭಾಭಿಷೇಕದ ಸಡಗರ

ಉಡುಪಿ: ಇಲ್ಲಿನ ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮದ ಸಡಗರದಲ್ಲಿದೆ.

ಶ್ರೀ ದೇವಸ್ಥಾನದ ಆಡಳಿತ ಮೊಕ್ತೇಸರರರಾಗಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನ ಹಾಗೂ ಮುಂದಾಳತ್ವದಲ್ಲಿ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಮೇ6ರಂದು ದೇವಳದಲ್ಲಿ ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಂಭ್ರಮದಿಂದ ನಡೆಯಲಿದೆ.

ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಪಣಿಯಾಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಚರಿತ್ರೆಯ ಪ್ರವಚನದ ಯೂಟ್ಯೂಬ್ ಗೆ ಚಾಲನೆ ನೀಡಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರ ನಾಯಕ್, ಉದ್ಯಮಿ ಕಲಾಪೋಷಕ ಡಾ| ತಲ್ಲೂರು ಶಿವರಾಮ ಶೆಟ್ಟಿ, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಿಶೋರ್ ಕುಮಾರ್, ನಗರಸಭೆ ಸದಸ್ಯ ಗಿರೀಶ್ ಅಂಚನ್, ಹಯವದನ ತಂತ್ರಿ, ವೇದವ್ಯಾಸ ಐತಾಳ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಎಂ. ವಿಶ್ವನಾಥ ಭಟ್ ಮೊದಲಾದವರಿದ್ದರು.

ಋತ್ವಿಜರ ಆಗಮನ
ಆಚಾರ್ಯಾದಿ ಋತ್ವಿಜರ ಸ್ವಾಗತ, ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪಂಚಗವ್ಯ ಪ್ರಾಶನ, ಪುಣ್ಯಾಹವಾಚನ, ದೇವ ನಾಂದಿ, ಆಚಾರ್ಯಾದಿ ಋತ್ವಕ್ಗ್ವರಣ, ಅರಣಿ ಮಥನ, ಆದ್ಯ ಗಣಯಾಗ ಇತ್ಯಾದಿ ನಡೆಯಿತು.

ಸಂಜೆ ಸಪ್ತಶುದ್ದಿ, ಅಂಕುರಾರೋಪಣ, ಪ್ರಾಸಾದ ಶುದ್ಧಿ, ರಾಕ್ಷೇಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ, ವಾಸ್ತುಹೋಮ, ಪ್ರಾಕಾರ ಬಲಿ, ಮಂಟಪಸಂಸ್ಕಾರ, ರಾತ್ರಿಪೂಜೆ ನಡೆಯಿತು.

ಭರತ ನಾಟ್ಯ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾನಸ ರಾವ್ ಮತ್ತು ವೃಂದದವರಿಂದ ಭರತ ನಾಟ್ಯ ನಡೆಯಿತು.
ಸ್ಥಳೀಯ ಕಲಾವಿದರಿಂದ ಅನಂತ ವಿಜಯ ಭಕ್ತಿಪ್ರಧಾನ ನಾಟಕ ಪ್ರದರ್ಶಿತಗೊಂಡಿತು.

 
 
 
 
 
 
 
 
 
 
 

Leave a Reply