ದುರ್ಗಾದೇವಿಯ ಮೂರನೇ ಅವತಾರ “ಚಂದ್ರಘಂಟಾ”

ಹಿಂದೂ ಧರ್ಮದ ಪ್ರಕಾರ ದುರ್ಗಾದೇವಿಯ ಮೂರನೇ ಅವತಾರವೇ ಚಂದ್ರಘಂಟಾ. ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರೆ ಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರ ಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

ಚಂದ್ರಘಂಟೆಯು ಶುಕ್ರ ಗ್ರಹದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿ ನೆಲೆಸುತ್ತದೆ.

ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಇದರಂತೆ ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತದೆ.

ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ, ತನ್ನ ಗಣಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.

ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ತೋಳುಗಳನ್ನು ಹೊಂದಿದ್ದಳು. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

ಚಂದ್ರಘಂಟೆಯ ರೂಪತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪವನ್ನು ತಾಳಲು ಭಿನ್ನವಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪತಾಳಿ, ಆಭರಣಗಳಿಂದ ಅಲಂಕೃತನಾಗಿ ಕಾಣಿಸಿಕೊಳ್ಳುತ್ತಾನೆ. ಶಿವ ಹಾಗೂ ಪಾರ್ವತಿಯ ವಿವಾಹವು ಸಾಂಗವಾಗಿ ನೆರವೇರುತ್ತದೆ. ಹೀಗೆ ಶಿವ ಹಾಗೂ ಪಾರ್ವತಿಯು ವಿವಾಹವಾದ ದಿನವನ್ನು ಪ್ರತಿವರ್ಷ ಮಹಾಶಿವರಾತ್ರಿಯೆಂದು ಆಚರಿಸಲಾಗುತ್ತದೆ.

ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ರಾಕ್ಷಸರಾದ ಶುಂಭ ಹಾಗೂ ನಿಶುಂಭನನ್ನು ಸೋಲಿಸುವ ಸಲುವಾಗಿ, ಪಾರ್ವತಿ ದೇವಿಯು ಕೌಶಿಕಿಯಾಗಿ ಅವತಾರವೆತ್ತುತ್ತಾಳೆ. ಕೌಶಿಕಿಯ ರೂಪವೇ ರಕ್ಕಸರ ವಿನಾಶವನ್ನು ಸೂಚಿಸುವಂತಿತ್ತು. ಶುಂಭನು ತನ್ನ ಸಹೋದರನಾದ ನಿಶುಂಭನಿಗೆ ಮದುವೆ ಮಾಡಲು ಯೋಜನೆ ಹಾಕಿದ ಶುಂಭ ಅವಳನ್ನು ಕರೆತರಲು ಧೂಮ್ರಲೋಚನನೆಂಬ ರಾಕ್ಷಸನನ್ನು ಕಳುಹಿಸುತ್ತಾನೆ. ಕೌಶಿಕಿಯು ಒಪ್ಪದಿದ್ದಾಗ ಧೂಮ್ರಲೋಚನನು ಹಲ್ಲೆಯನ್ನು ಮುಂದಾದಾಗ ಕೋಪಗೊಂಡ ಕೌಶಿಕಿ ಮಾತೆಯು ಕೇವಲ ‘ಹೂಂಕಾರ’ದಿಂದಲೇ ಧೂಮ್ರಲೋಚನನ್ನು ನಿರ್ಣಾಮ ಮಾಡುತ್ತಾಳೆ.

ದುಷ್ಟರನ್ನು ಸಂಹಾರ ಮಾಡಲು ಸದಾ ಸಿದ್ಧವಾಗಿರುವ ಭಂಗಿಯಲ್ಲಿರುವ ಚಂದ್ರಘಂಟೆಯ ಘಂಟಾನಾದದಿಂದಲೇ ಸಾವಿರಾರು ಅಸುರರು ನಿರ್ನಾಮವಾದರು. ಈಕೆಯ ಕೃಪೆಯಿಂದ ಭಕ್ತರ ಎಲ್ಲಾ ಪಾಪಗಳು, ಕಷ್ಟಗಳು, ದೈಹಿಕ ನೋವು, ಮಾನಸಿಕ ತೊಂದರೆಗಳು ನಿವಾರಣೆಯಾಗುತ್ತವೆ. ಸಿಂಹವಾಹಿನಿಯಾದ ಈಕೆಯು ಭಕ್ತರಲ್ಲಿ ನಿರ್ಭಯತೆಯನ್ನು ಮೂಡಿಸುತ್ತಾಳೆ.

 
 
 
 
 
 
 
 
 
 
 

Leave a Reply