ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ 2017ರಲ್ಲಿ ಅಶಾಂತಿಗೆ ಕಾರಣವಾದ ಭಯೋತ್ಪಾದನೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಕೋರ್ಟ್ ಗುರುವಾರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲ್ಲಿಕ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜತೆಗೆ 10 ಲಕ್ಷ ರೂ. ದಂಡ ವಿಧಿಸಿದೆ.
ಕಠಿಣ ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ) ಅಡಿಯಲ್ಲಿ ಬರುವ ಆರೋಪಗಳ ಸಹಿತ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ಮಲ್ಲಿಕ್ ಮೇ 10ರಂದು ಒಪ್ಪಿಕೊಂಡಿದ್ದ. ಹಣಕಾಸು ವಿವರಗಳನ್ನು ಸಲ್ಲಿಸುವಂತೆ ಆತನಿಗೆ ಸೂಚಿಸಿದ್ದ ಕೋರ್ಟ್, ಆ ಬಗ್ಗೆ ಪರಿಶೀಲಿಸುವಂತೆ ಎನ್ಐಎಗೆ ನಿರ್ದೇಶಿಸಿತ್ತು. ತಪ್ಪೊಪ್ಪಿಗೆ ಬಗ್ಗೆ ಮರುಪರಿಶೀಲನೆ ನಡೆಸುತ್ತೀರಾ ಎಂದು ನ್ಯಾಯಾಧೀಶರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮಲ್ಲಿಕ್, ಚೆನ್ನಾಗಿ ಯೋಚಿಸಿಯೇ ತಾನು ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದ.
ಅಮಿಕಸ್ ಕ್ಯೂರಿಯನ್ನು ಎರಡು ಬಾರಿ ಭೇಟಿಯಾಗಿ ಚಚಿರ್ಸಿದ್ದ. ಮಲ್ಲಿಕ್ ಸ್ವಪ್ರೇರಣೆಯಿಂದ ಹಾಗೂ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಗಳ ನಂತರ ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದು ಅದನ್ನು ಅಂಗೀಕರಿಸಲಾಗಿದೆ ಎಂದು ಜಡ್ಜ್ ತೀರ್ಪಿನಲ್ಲಿ ಹೇಳಿದ್ದಾರೆ.
ಶಿಕ್ಷೆಯ ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಯಾಸಿನ್ ಮಲಿಕ್, ತಾನು ಗಾಂಧೀಜಿ ತತ್ವಗಳನ್ನು ಹಾಗೂ ಅಹಿಂಸೆಯ ರಾಜಕಾರಣವನ್ನು ಅನುಸರಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ! ಆಯುಧಗಳನ್ನು ತ್ಯಜಿಸಿದ ಬಳಿಕ ನಾನು, ಮಹಾತ್ಮ ಗಾಂಧಿ ಅವರ ತತ್ವಗಳನ್ನು ಅನುಸರಿಸಿದ್ದೇನೆ. ಅಂದಿನಿಂದ ಕಾಶ್ಮೀರದಲ್ಲಿ ಅಹಿಂಸಾ ರಾಜಕಾರಣವನ್ನು ಪಾಲಿಸುತ್ತಿದ್ದೇನೆ” ಎಂದು ಆತ ಕೋರ್ಟ್ನಲ್ಲಿ ಹೇಳಿದ್ದಾನೆ.
ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕೋರ್ಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಯಾಸಿನ್ ಮಲಿಕ್ ಮನೆಯ ಬಳಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೋರ್ಟ್ ಆವರಣದ ಒಳಗೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸಿತು. ಪಟಿಯಾಲ ಹೌಸ್ ಕೋರ್ಟ್ನ ವಿಶೇಷ ಎನ್ಐಎ ನ್ಯಾಯಾಧೀಶ ಪ್ರವೀಣ್ ಸಿಂಗ್ ಶಿಕ್ಷೆ ಪ್ರಕಟಿಸಿದರು. ನ್ಯಾಯಾಲಯದ ಆವರಣಕ್ಕೆ ಭದ್ರತೆ ಒದಗಿಸಲು ಸಿಆರ್ಪಿಎಫ್ ಪಡೆಗಳನ್ನು ಕರೆಸಲಾಗಿತ್ತು.
ಕಲ್ಲು ತೂರಾಟ ಪ್ರಕರಣಗಳು: 2016ರಲ್ಲಿ ಕಲ್ಲು ತೂರಾಟದ 89 ಪ್ರಕರಣಗಳು ದಾಖಲಾಗಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗದ (ಜೆಕೆಎಲ್ಎಫ್) ಮುಖ್ಯಸ್ಥ ಮಲ್ಲಿಕ್ ಪ್ರಚೋದಿಸಿದ್ದ ಎಂದು ಎನ್ಐಎ ಆರೋಪಿಸಿತ್ತು. ಆತನ ಮನೆ ಮೇಲೆ ದಾಳಿ ಮಾಡಿದಾಗ ಹಿಜ್ಬುಲ್ ಮುಜಾಹಿದಿನ್ ಸಂಟನೆಯ ಲೆಟರ್ಹೆಡ್ ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಎನ್ಐಎ ಹೇಳಿದೆ.
ಶಿಕ್ಷೆ ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಶ್ರೀನಗರದ ಮೈಸುಮಾ ಪ್ರದೇಶದಲ್ಲಿ ಯಾಸಿನ್ ಮಲಿಕ್ ಬೆಂಬಲಿಗರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದೆ. ಯಾಸಿನ್ ಮಲಿಕ್ ಮನೆಯ ಮುಂದೆ ತೀರ್ಪು ಖಂಡಿಸಿ ಪ್ರತಿಭಟನೆಗಳು ನಡೆದಿವೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸೂಕ್ಷ್ಮ ಪ್ರದೇಶಗಳಲ್ಲಿ, ಮುಖ್ಯವಾಗಿ ಶ್ರೀನಗರದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಕೆಲವು ಕಡೆ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.