ಶ್ರೀಪಾದ ನಾಯ್ಕ ಅವರ ಆರೋಗ್ಯ  ಸ್ಥಿರ: ಸಚಿವ ರಾಜನಾಥ್ ಸಿಂಗ್

ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಗೋವಾ ಬಾಂಬೋಲಿಂ ಆಸ್ಪತ್ರೆಯ ವೈದ್ಯರೊಂದಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರ ತಂಡ ಸತತವಾಗಿ ಸಂಪರ್ಕದಲ್ಲಿದ್ದು, ಸದ್ಯ ಎಲ್ಲ ಚಿಕಿತ್ಸೆಯನ್ನೂ ಅವರ ಮಾರ್ಗದರ್ಶನದಲ್ಲಿ ಗೋವಾದಲ್ಲಿಯೇ ನೀಡಲಿದ್ದಾರೆ. 
ಅಗತ್ಯಬಿದ್ದರೆ ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಂಗಳವಾರ ದೆಹಲಿಯಿಂದ ಗೋವಾಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಆಸ್ಪತ್ರೆಗೆ ತೆರಳಿ ಶ್ರೀಪಾದ ನಾಯ್ಕ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀಪಾದ ನಾಯ್ಕ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ .ಅವರಿಗೆ ಗೋವಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆ ಯಲಿದೆ. ಇಲ್ಲಿನ ವೈದ್ಯರು ಸಮಯಕ್ಕೆ ತಕ್ಕಂತೆಯೇ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ, ಇದಕ್ಕೆ ಬಾಂಬೋಲಿಂ ವೈದ್ಯರ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಶ್ರೀಪಾದ ನಾಯ್ಕ ಅವರಿಗೆ ಅಪಘಾತವಾಗಿರುವ ವಿಷಯ ತಿಳಿದ ನಂತರ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ್ದೇನೆ. ಪ್ರಧಾನಿ ಅವರು ಗೋವಾ ಸಿಎಂ ಜೊತೆ ಮಾತನಾಡಿದ್ದಾರೆ. ಬಳಿಕ ಪ್ರಧಾನಿ ಅವರು ನನಗೆ ದೂರವಾಣಿ ಕರೆ ಮಾಡಿ ನೀವೆ ಸ್ವತಃ ಗೋವಾಕ್ಕೆ ತೆರಳಿ ಶ್ರೀಪಾದ ನಾಯ್ಕರ ಆರೋಗ್ಯ ವಿಚಾರಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನೇರವಾಗಿ ಗೋವಾಕ್ಕೆ ಆಗಮಿಸಿ ದ್ದಾಗಿ ಹೇಳಿದ್ದಾರೆ.
 
 
 
 
 
 
 
 
 
 
 

Leave a Reply