ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರಾಖಂಡದಲ್ಲಿ ನಮಾಮಿ ಗಂಗೆ ಮಿಷನ್ನಡಿ ಆರು ಬೃಹತ್ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಲಾಲ್ ಜೀವನ್ ಮಿಷನ್ ಲೋಗೋವನ್ನೂ ಕೂಡ ಉದ್ಘಾಟಿಸಿದರು. 68 ಎಂಎಲ್ಡಿ (ಮಿಲಿಯನ್ ಲೀಟರ್ ಪರ್ ಡೇ) ಒಳಚರಂಡಿ ಸಂಸ್ಕರಣಾ ಘಟಕ (ಎಸ್ಟಿಪಿ) ನಿರ್ಮಾಣ, ಹರಿದ್ವಾರದ ಜಗಜ್ಜೀತ್ಪುರದಲ್ಲಿರುವ 27 ಎಂಎಲ್ಡಿ ಸ್ಥಾವರ ನವೀಕರಣ ಮತ್ತು ಸರೈನಲ್ಲಿ 18 ಎಂಎಲ್ಡಿ ಎಸ್ಟಿಪಿ ನಿರ್ಮಾಣ ಸೇರಿ ಒಟ್ಟು ಆರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಬಳಿಕ ಪ್ರಧಾನಿ ಮೋದಿ ಮಾತನಾಡಿ, ಈ ಹಿಂದೆ ಗಂಗಾ ನದಿ ಸ್ವಚ್ಛತೆಗಾಗಿ ಹಲವಾರು ಯೋಜನೆ ಕಾರ್ಯಕ್ರಮಗಳನ್ನು ರೂಪಿಸಿದ್ದು ಇವುಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಅವಕಾಶವಿರಲಿಲ್ಲ. ಹಾಗೆಯೇ ಮುಂದಿನ ದೂರದೃಷ್ಟಿಯು ಇರಲಿಲ್ಲ, ಆದ್ದರಿಂದ ಗಂಗಾನದಿ ಶುದ್ಧವಾಗಲಿಲ್ಲ. ಆದರೆ ನಮ್ಮ ಸರ್ಕಾರದ ನಮಾಮಿ ಗಂಗಾ ಯೋಜನೆಯಡಿ ಗಂಗಾ ಶುದ್ಧೀಕರಣ ಕಾರ್ಯ ನಡೆಯುತ್ತಿದೆ.
ಸರ್ವತೋಮುಖ ಕಾರ್ಯದಿಂದ ನಮಾಮಿ ಗಂಗೆ ಮಿಷನ್ನಡಿ 30 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣವಾಗಿದೆ. ನಾವು ಈ ಮಿಷನ್ನ್ನು ಕೇವಲ ಗಂಗಾ ನದಿ ಸ್ವಚ್ಛತೆಗೆ ಮಾತ್ರ ಸೀಮಿತವಾಗಿರಿಸದೆ ದೇಶದ ಅತಿದೊಡ್ಡ ಮತ್ತು ಸಮಗ್ರ ನದಿ ಸಂರಕ್ಷಣಾ ಯೋಜನಾ ಕಾರ್ಯವಾಗಿ ರೂಪಿಸಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.