ಅಯೋಧ್ಯೆ: ಶ್ರೀರಾಮ ಮಂದಿರ ನಿರ್ವಣಕ್ಕೆ ಅಪಾರ ಪ್ರಮಾಣದಲ್ಲಿ ದಾನ ಬರುತ್ತಿದ್ದು, ಚಿನ್ನ, ಬೆಳ್ಳಿಯ ಮತ್ತು ಅಮೂಲ್ಯ ವಸ್ತುಗಳು ಕ್ವಿಂಟಾಲ್ಗಟ್ಟಲೆ ಬಂದಿದೆ. ಆದರೆ, ಇಂಥ ವಸ್ತುಗಳನ್ನು ದಾನವನ್ನು ಮಾಡಬೇಡಿ ಬದಲಿಗೆ ಧನ ಸಹಾಯ ಮಾಡಿಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ. ಅಯೋಧ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ದಿನದಿಂದಲೂ ಅಪಾರ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ, ತಾಮ್ರ ಸೇರಿದಂತೆ ಹಲವು ಲೋಹಗಳ ಇಟ್ಟಿಗೆ ಇನ್ನಿತರ ವಸ್ತುಗಳು ಅಯೋಧ್ಯೆಗೆ ಬಂದಿವೆೆ. ಈ ಸಂಪತ್ತನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕಷ್ಟವಾಗಿದೆ. ಅದಕ್ಕೆಂದೇ ವಿಶೇಷವಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಿಕೊಳ್ಳಲಾಗಿದೆ.
ಆದರೆ ಇವನ್ನೆಲ್ಲ ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎನ್ನುವುದೇ ಟ್ರಸ್ಗೆ ಸವಾಲಾಗಿದೆ. ಆಗಸ್ಟ್ 5ರಂದು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಐದು ಬೆಳ್ಳಿ ಇಟ್ಟಿಗೆಗಳನ್ನು ಇಡಲಿದ್ದಾರೆ. ಅಂದು 40 ಕೆ.ಜಿ ತೂಕದ ಬೆಳ್ಳಿ ಇಟ್ಟಿಗೆಗಳನ್ನು ಇರಿಸಲಾಗುವುದು ಎನ್ನಲಾಗಿದೆ. ಹಾಗಾಗಿ ದಯಮಾಡಿ ಭಕ್ತರು ಚಿನ್ನಾಭರಣವನ್ನು ಕಳಿಸುವುದನ್ನು ನಿಲ್ಲಿಸಿ ಎಂದು ಟ್ರಸ್ಟ್ ಕೇಳಿಕೊಂಡಿದ.
ಆಗಸ್ಟ್ 5ರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಯೋಧ್ಯೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಅಯೋಧ್ಯೆಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ, ಮೊದಲು ಹನುಮನಗರಿಯಲ್ಲಿನ ಹನುಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಬರುವ ಅವರು, ಶಿಲಾನ್ಯಾಸ ನೆರವೇರಿಸಿ ಮಾತನಾಡಲಿದ್ದಾರೆ. ಸಾಧು ಸಂತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅದಾದ ನಂತರ ಅಯೋಧ್ಯೆ ಅಭಿವೃದ್ಧಿ ಕಾರ್ಯದ ಭಾಗವಾಗಿ ಕೆಲ ಕಟ್ಟಡಗಳ ಗುದ್ದಲಿ ಪೂಜೆಯನ್ನೂ ನಡೆಸಲಿದ್ದಾರೆ ಎನ್ನಲಾಗಿದೆ.