ಕಾಸರಗೋಡು: ಕೇರಳದಿಂದ ಕರ್ನಾಟಕಕ್ಕೆ ಹೋಗುವ ಎಲ್ಲ ಗಡಿಗಳನ್ನು ತೆರೆದು ಅಂತರ್ ರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಿ ಕೇರಳ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ. ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ರವರು ಗಡಿಗಳಲ್ಲಿ ಮುಕ್ತ ಸಂಚಾರಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅದರ ಕುರಿತು ವಿಚಾರಣೆ ನಡೆಸಿ ಕೇರಳದ ಉಚ್ಛ ನ್ಯಾಯಾಲಯ ಈ ತೀರ್ಪು ನೀಡಿದೆ.
ಕೊರೋನಾ ಹಿನ್ನೆಲೆಯಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಗಡಿಗಳನ್ನು ಮುಚ್ಚಲಾಗಿತ್ತು. ಅನ್ ಲಾಕ್-3ರ ನಂತರವೂ ಕೇರಳ ಸರಕಾರ ಹಾಗೂ ಕಾಸರಗೋಡು ಜಿಲ್ಲಾಡಳಿತ ಅಂತಾರಾಜ್ಯ ಮುಕ್ತ ಸಂಚಾರಕ್ಕೆ ಅನುಮತಿ ನೀಡಿರಲಿಲ್ಲ.
ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಕಾರಣ ಕರ್ನಾಟಕವು ಮೊದಲಿಗೆ ತನ್ನೆಲ್ಲ ಕೇರಳದ ಗಡಿಗಳನ್ನು ಮಣ್ಣು ಹಾಕಿ ಮುಚ್ಚಿತ್ತು. ಆದರೆ ನಂತರದಲ್ಲಿ ಪಾಸ್ ಮೂಲಕ ಕಾಸರಗೋಡಿನಿಂದ ಬರಲು ಅನುಮತಿ ನೀಡಿತ್ತು. ಆದರೆ ಏಕಾಏಕಿ ಜುಲೈ 6 ರಿಂದ ಕಾಸರಗೋಡು ಜಿಲ್ಲಾಡಳಿತವು ಎಲ್ಲ ಪಾಸ್ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿದ್ದ ಕಾರಣ ಮಂಗಳೂರಿಗೆ ಹೋಗುವ ಉದ್ಯೋಗಿಗಳು, ವಿದ್ಯಾರ್ಥಿಗಳು, ರೋಗಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಅಲ್ಲದೆ ಕಾಸರಗೋಡು ಜಿಲ್ಲಾಡಳಿತದ ಈ ಜನ ವಿರೋಧಿ ನಿರ್ಧಾರವು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
ಇದೀಗ ಕೇರಳದ ಹೈಕೋರ್ಟ್ ನ ಈ ಮಹತ್ವದ ಆದೇಶವು ಉಭಯ ರಾಜ್ಯಗಳ ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ.