ಕೋಯಿಕ್ಕೋಡ್: ಕಳೆದ ಶುಕ್ರವಾರ ಇಲ್ಲಿನ ಕೇರಳ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ ಸಹಪೈಲಟ್ ಅಖಿಲೇಶ್ ಕುಮಾರ್ ಪತ್ನಿಗೆ ಇದುವರೆಗೂ ತನ್ನ ಪತಿಯ ಸಾವಿನ ಬಗ್ಗೆ ಮಾಹಿತಿಯೇ ಇಲ್ಲ!
ತುಂಬು ಗರ್ಭಿಣಿಯಾಗಿರುವ ಆಕೆ, ಮುಂದಿನ ಒಂದು ವಾರದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಆ ಕಾರಣಕ್ಕಾಗಿ ಆಕೆಗೆ ಆಘಾತವಾಗದಿರಲಿ ಎಂಬ ಕಾರಣಕ್ಕೆ ಅವರಿಗೆ ಇನ್ನೂ ಪತಿಯ ಸಾವಿನ ವಿಷಯ ತಿಳಿಸಿಲ್ಲ.
ದುಬೈನಿಂದ 191 ಮಂದಿ ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ್ದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬಲಿಯಾಗಿರುವರಲ್ಲಿ ಅಖಿಲೇಶ್ ಕೂಡಾ ಒಬ್ಬರು. ಉತ್ತರ ಪ್ರದೇಶದ ಮಥುರಾ ಮೂಲದ ಅಖಿಲೇಶ್, 2017ರಲ್ಲಿ ಮೇಘಾ ಅವರನ್ನು ವಿವಾಹವಾಗಿದ್ದು,ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು.
ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಕೆಲವು ತಿಂಗಳ ಹಿಂದಷ್ಟೇ ಅಖಿಲೇಶ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಸುತ್ತುವರೆದು ಜೈಜೈಕಾರ ಹಾಕಿದ್ದರು. ಕಾರಣ, ಕೊರೊನಾ ಲಾಕ್ಡೌನ್ ಬಳಿಕ ಭಾರತದಿಂದ ಆರಂಭವಾಗಿದ್ದ ವಂದೇ ಭಾರತ್ ವಿಮಾನವನ್ನು ಮೊದಲು ಇಳಿಸಿದವರು ಇದೇ ಅಖಿಲೇಶ್.
ಆದರೆ, ಅದೇ ಅಖಿಲೇಶ್ ಇದೀಗ ವಿಮಾನ ದುರಂತದಲ್ಲಿ ಸಾವನ್ನಪ್ಪಿ, ಎಲ್ಲರೂ ಕಣ್ಣೀರು ಮಿಡಿಯುವಂತಾಗಿದೆ.