ವಿರೋಧ ಪಕ್ಷದ ಪರವಾಗಿ ಮಾತನಾಡಿದ ರಮೇಶ್ ಕಾಂಚನ್ ಅವರು ನೂತನ ಅಧ್ಯಕ್ಷರಿಗೆ ನಗರಸಭೆಯ ಬಗ್ಗೆ ಉತ್ತಮವಾದ ಅನುಭವವಿದ್ದು ಮೂರನೇ ಬಾರಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ನಗರಸಭೆಯಲ್ಲಿ ಮಾಡುವ ಉತ್ತಮ ಆಡಳಿತಾತ್ಮಕ ಕೆಲಸಗಳಿಗೆ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸದಾ ಬೆಂಬಲ ನೀಡಲಿದ್ದು ಸಂಖ್ಯೆಯ ಅನುಗುಣ ದಲ್ಲಿ ಕಾಂಗ್ರೆಸ್ ಪಕ್ಷದಿಂದ ಕೇವಲ ನಾಲ್ಕು ಮಂದಿ ಇದ್ದರೂ ಕೂಡ ನಮ್ಮನ್ನು ಕಡೆಗಣಿಸುವುದು ಕಂಡು ಬಂದರೆ ಸದನದ ಒಳಗೂ ಹೊರಗೂ ಪ್ರತಿಭಟಿಸಲಾಗುವುದು ಎಂದರು.
ನೂತನ ಅಧ್ಯಕ್ಷೆ ಸುಮೀತ್ರಾ ನಾಯಕ್ ಮಾತನಾಡಿ ತನ್ನನ್ನು ಪಕ್ಷ ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಿ ಅಧ್ಯಕ್ಷ ಸ್ಥಾನ ಎನ್ನುವುದು ಒಂದು ಹುದ್ದೆ ಎನ್ನುವುದನ್ನು ಮರೆತು ಅದೊಂದು ಜವಾಬ್ದಾರಿ ಎಂದು ತಿಳಿದು ಕೆಲಸ ನಿರ್ವಹಿಸುತ್ತೇನೆ. ಎಲ್ಲರ ಸಹಕಾರ ಮಾರ್ಗದರ್ಶನದಿಂದ ನಗರಸಭೆಯಲ್ಲಿ ಸ್ವಚ್ಚ ಆಡಳಿತದೊಂದಿಗೆ ಪ್ಲಾಸ್ಟಿಕ್ ಮುಕ್ತ ನಗರಸಭೆ ಮಾಡುವತ್ತ ವಿಶೇಷ ಗಮನ ಕೊಡುವುದಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ಪ್ರಭಾಕರ ಪೂಜಾರಿ, ಯೋಗಿಶ್ ಸಾಲಿಯಾನ್, ವಿಜಯ ಕೊಡವೂರು, ಕ್ರಷ್ಣರಾಜ್ ಕೊಡಂಚ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.