ಮಲ್ಪೆ-ಪಡುಕೆರೆ ಭಾಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಮರಿನಾ ನಿರ್ಮಿಸಿ~ಶಾಸಕ ರಘುಪತಿ ಭಟ್ ಬೇಡಿಕೆ

ಮಲ್ಪೆ-ಪಡುಕೆರೆ ಸಮುದ್ರ ಭಾಗವು ಮರಿನಾ ನಿರ್ಮಿಸಲು ಸೂಕ್ತವಾಗಿದೆ ಎಂಬ ಬಗ್ಗೆ ತಜ್ಞರ ವರದಿ ಆಧಾರದ ಮೇಲೆ ಪ್ರವಾಸೋದ್ಯಮದ ಜತೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕತೆ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮಲ್ಪೆ-ಪಡುಕೆರೆ ಭಾಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಮರಿನಾ ನಿರ್ಮಿಸಲು ಯೋಜನೆ ರೂಪಿಸಿ ಮಂಜೂರು ಗೊಳಿಸಿ ಎಂದು ಶಾಸಕ ರಘುಪತಿ ಭಟ್ ಅವರು ಗೃಹ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.ಗುರುವಾರದಂದು ಮಲ್ಪೆ ಕಡಲ ಕಿನಾರೆಯ ಸೀ ವಾಕ್ ಬಳಿ ನಿರ್ಮಿಸಲಾದ ಬಯಲು ರಂಗಮಂದಿರ ಹಾಗೂ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ಪ್ರವಾಸಿಗರನ್ನು ಹಾಗೂ ಭಕ್ತಾದಿಗಳನ್ನು ಸೆಳೆಯುವ ಆಕರ್ಷಣೀಯ ತಾಣಗಳನ್ನು, ಪುಣ್ಯ  ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿಯೂ ಇಲ್ಲಿನ ಕಡಲ ಕಿನಾರೆಗೆ (ಬೀಚ್) ದೇಶ – ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುವುದರಿಂದ ಇಲ್ಲಿನ ಕಡಲ ಕಿನಾರೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಅಭಿವೃದ್ಧಿಗಳನ್ನು ಮಾಡಿದಲ್ಲಿ ಜಿಲ್ಲೆಯ ಆರ್ಥಿಕತೆ ವೃದ್ಧಿಗೆ ಸಹಾಯಕವಾಗುತ್ತದೆ.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.  ಬಯಲು ರಂಗಮಂದಿರ ಹಾಗೂ ಉದ್ಯಾನವನವನ್ನು ಉದ್ಘಾಟಿಸಿದ ಗೃಹಸಚಿವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ ಮಲ್ಪೆ-ಪಡುಕೆರೆ ಭಾಗದಲ್ಲಿ ಮರಿನಾ ನಿರ್ಮಾಣದ  ಯೋಜನೆಯ ಡಿಪಿಆರ್ ತಯಾರಿಸಲು ರೂ. 1.00 ಕೋಟಿ ವೆಚ್ಚವಾಗಲಿದೆ.

ತಕ್ಷಣದಲ್ಲಿ ಅನುದಾನ ಮಂಜೂರುಗೊಳಿಸಿ ಡಿ. ಪಿ. ಆರ್ ತಯಾರಿಸಲು ಸೂಚಿಸಿ ನಂತರ ಯೋಜನೆಯ ಅನುಷ್ಠಾನಕ್ಕೆ ಅನುದಾನಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ಅವರು ಉಡುಪಿ ಜಿಲ್ಲೆಯಲ್ಲಿ ಸಮಗ್ರ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಉಡುಪಿಯ ಪ್ರವಾಸಿ ತಾಣಗಳನ್ನು, ಪುಣ್ಯ ಕ್ಷೇತ್ರಗಳನ್ನು ಸೇರಿಸಿ ಲೋಗೋ ಸಿದ್ಧಪಡಿಸಿ, ಟಾಸ್ಕ್ ಫೋರ್ಸ್ ಸಕ್ರಿಯಗೊಳಿಸಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ದೂರದೃಷ್ಟಿಯ ಸಮಗ್ರ ವರದಿ ಸಿದ್ಧಪಡಿಸಿ ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ  ಲಕ್ಷ್ಮೀ ಮಂಜುನಾಥ ಕೊಳ, ಸ್ಥಳೀಯ ನಗರಸಭಾ ಸದಸ್ಯೆ ಎಡ್ಲಿನ್ ಕರ್ಕಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮತ್ತು ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ, ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಸಹಾಯಕ ಪೋಲಿಸ್ ಅಧೀಕ್ಷಕ ಕುಮಾರ್ ಚಂದ್ರ  ಉಪಸ್ಥಿತರಿದ್ದರು. ಯುವ ಜನ ಸಬಲೀಕರಣ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 

Leave a Reply