ಉತ್ತರಕನ್ನಡ: ಗಡಿ ಪ್ರದೇಶದಲ್ಲಿ ಪುಂಡಾಟಿಕೆ ನಡೆಸುವ ಎಂಇಎಸ್ ಸಂಘಟನೆ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಗುಡುಗಿದ್ದು, ಹೀಗೇ ಮುಂದುವರಿದರೆ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಬೇಕಾದ್ದು ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಎಂಇಎಸ್ ಗಡಿ ವಿವಾದಗಳ ಕುರಿತಾಗಿ ಇಂದು ಉತ್ತರಕನ್ನಡ ಜಿಲ್ಲೆಯ ಅಂಕೋಲದಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗಾಗಿ ಎಂಇಎಸ್ ಪುಂಡರ ಮೇಲಿನ ದೇಶದ್ರೋಹ ಪ್ರಕರಣ ವಾಪಸ್ ತೆಗೆದುಕೊಳ್ಳುವುದು ಸರಿಯಲ್ಲ. ಸರ್ಕಾರಕ್ಕೆ ಈ ಬಗ್ಗೆ ಮನದಟ್ಟು ಮಾಡುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಲಿದೆ ಎಂದು ಹೇಳಿದ್ದಾರೆ.
ಕನ್ನಡಿಗರ ಮನೋಭಾವನೆಯನ್ನು ಕೆರಳಿಸುವ ಪ್ರಯತ್ನವನ್ನು ಎಂಇಎಸ್ ನಿರಂತರವಾಗಿ ಮಾಡುತ್ತಿದೆ. ಎಂಇಎಸ್ ಗಡಿವಿವಾದ ಹೇಳಿಕೆಗಳನ್ನು ಸರ್ಕಾರ ಮೊದಲ ಖಂಡಿಸಬೇಕು ಎಂದ ಅವರು, ಎಂಇಎಸ್ನಿಂದ ಇಂಥವು ಹೀಗೇ ಮುಂದುವರಿದರೆ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ, ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದರು.
ರಾಜ್ಯ ಸರ್ಕಾರ ಎಂಇಎಸ್ ಪುಂಡಾಟಿಕೆ ವಿರುದ್ಧ ಸ್ಪಷ್ಟ ನಿಲುವು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಮಹಾರಾಷ್ಟ್ರದ ಹಲವು ಹಳ್ಳಿಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಅಧಿಕವಾಗಿದೆ. ಅವೆಲ್ಲವೂ ಕರ್ನಾಟಕಕ್ಕೆ ಸೇರಬೇಕೆಂಬ ಹೋರಾಟ ಅನಿವಾರ್ಯವಾಗಲಿದೆ ಎಂದ ಜೋಶಿ, ನಾವೆಲ್ಲ ಭಾತೃತ್ವದ ಭಾವನೆಯಲ್ಲಿ ಇದ್ದಾಗ ಎಂಇಎಸ್ ಪುಂಡಾಟಿಕೆ ಬಿಡಬೇಕು ಎಂದರು.