ಕೆಯುಡಬ್ಲ್ಯೂಜೆ ಚುನಾವಣೆ ಬಗ್ಗೆ ಸಲ್ಲಿಸಿದ್ದ ತಕರಾರು ಅರ್ಜಿ ವಜಾ ಮಾಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಚುನಾವಣೆ ಬಗ್ಗೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್, ನಿಯಮಾವಳಿ ಪ್ರಕಾರ ನ್ಯಾಯಸಮ್ಮತವಾಗಿ ಚುನಾವಣೆ ನಡೆದಿದೆ ಎನ್ನುವುದನ್ನು ಎತ್ತಿ ಹಿಡಿದಿದೆ. ಚುನಾವಣಾ ಫಲಿತಾಂಶಕ್ಕೆ ನೀಡಿದ್ದ ತಡೆಯಾಜ್ಞೆಯು ತೆರವಾಗಿದೆ.

ತಕರಾರು: ಕೆಯುಡಬ್ಲ್ಯೂಜೆ ಚುನಾವಣೆ ಕ್ರಮಬದ್ದವಾಗಿ ನಡೆದಿಲ್ಕ. ಕರ್ನಾಟಕ ಟ್ರೇಡ್ ಯುನಿಯನ್ ಎಲೆಕ್ಷನ್ (ಮಾಡೆಲ್ ರೂಲ್ಸ್) 1953 ಪ್ರಕಾರ ಚುನಾವಣೆ ಮಾಡಿಲ್ಲ. ಚುನಾವಣಾಧಿಕಾರಿ ನೇಮಕ ಸಕ್ರಮವಾಗಿಲ್ಲ. ಸರ್ವ ಸದಸ್ಯರ ಸಭೆಯಲ್ಲಿ ಚುನಾವಣಾ ಅಜೆಂಡಾ ಹಾಕಿಲ್ಲ ಎಂಬಿತ್ಯಾದಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು.

ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಆಗಿರುವ ಕರ್ನಾಟಕ ಯುನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಹೆಸರು ಬಿಟ್ಟು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಎಂಬ ಹೆಸರಿನಲ್ಲಿ ಚುನಾವಣೆ ನಡೆಸಿರುವುದು ಸರಿಯಲ್ಲ ಎಂದು ತಕರಾರು ಸಲ್ಲಿಸಲಾಗಿತ್ತು.

ಚುನಾವಣಾ ತಕರಾರು ಎತ್ತಿದ್ದ ಅಮರನಾಥ್, ಬಂಗ್ಲೆ ಮಲ್ಲಿಕಾರ್ಜುನ ಮತ್ತಿತರರು, ಚುನಾವಣಾ ಕ್ರಮವನ್ನು ಆಕ್ಷೇಪಿಸಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಚುನಾವಣಾಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆಯನ್ನು ಪ್ರತಿವಾದಿಯನ್ನಾಗಿಸಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. 

ವಿಚಾರಣೆ: ಚುನಾವಣೆಗೆ ತಡೆ ನೀಡಲು ನಿರಾಕರಿಸಿದ್ದ ಹೈಕೋರ್ಟ್ ಚುನಾವಣಾ ಫಲಿತಾಂಶ ಪ್ರಕಟ ಮಾಡದಂತೆ ಮಧ್ಯಂತರ ತೀರ್ಪು ನೀಡಿತ್ತು. ಹಾಗಾಗಿ ದಿನಾಂಕ 27.2.2022 ರಂದು ಚುನಾವಣೆ ನಡೆದರೂ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿರಲಿಲ್ಲ.

ಸುಧೀರ್ಘ ವಿಚಾರಣೆ‌ ನಡೆಸಿದ ಹೈಕೋರ್ಟ್ ಕೆಯುಡಬ್ಲ್ಯೂಜೆ ಚುನಾವಣಾ ಪ್ರಕ್ರಿಯೆಯು ಕ್ರಮಬದ್ದವಾಗಿ ನಡೆದಿರುವುದನ್ನು ಎತ್ತಿ ಹಿಡಿದಿದೆ. 

ಅರ್ಜಿದಾರರ ತಕರಾರುಗಳು ಊರ್ಜಿತವಲ್ಲ ಎಂದು ನಾಯಾಧೀಶರಾದ ಎಸ್.ಜಿ.ಪಂಡಿತ್ ಅವರಿದ್ದ ನ್ಯಾಯಪೀಠ ಹೇಳಿದೆ.

ಕಳೆದ ಒಂದೂವರೆ ತಿಂಗಳಿಂದ ಚುನಾವಣೆಗೆ ಇದ್ದ ಮಧ್ಯಂತರದ ತಡೆಯಾಜ್ಞೆ ತೆರವಾಗಿದ್ದು, ಇದು ನ್ಯಾಯಕ್ಕೆ ಸಿಕ್ಕ ಜಯ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರತಿಕ್ರಿಯಿಸಿದ್ದಾರೆ.

ಏಳು ಸಾವಿರ ಸದಸ್ಯರು: 31 ಜಿಲ್ಲಾ ಘಟಕ ಮತ್ತು ರಾಜ್ಯ ಘಟಕಕ್ಕೆ ಏಕಕಾಲದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಮತದಾನದ ಹಕ್ಕು ಹೊಂದಿದ್ದರು.

ರಾಜ್ಯ ಘಟಕ: ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಸಿ.ಲೋಕೇಶ್, ಕಾರ್ಯದರ್ಶಿಗಳಾಗಿ ಮತ್ತಿಕೆರೆ ಜಯರಾಂ, ನಿಂಗಪ್ಪ ಚಾವಡಿ, ಸೋಮಶೇಖರ ಕೆರಗೋಡು ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. 

ಮೂರು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು.

ಜಿಲ್ಲಾ ಘಟಕಗಳು: ಹದಿಮೂರು ಜಿಲ್ಲಾ ಘಟಕಗಳಿಗೆ ಅವಿರೋಧ ಆಯ್ಕೆ ಆಗಿದ್ದು ಇನ್ನುಳಿದ ಜಿಲ್ಲೆಗಳಿಗೆ ಚುನಾವಣೆ ನಡೆದಿತ್ತು.

ಕೆಯುಡಬ್ಲ್ಯೂಜೆ ಪರವಾಗಿ ಹಿರಿಯ ಖ್ಯಾತ ವಕೀಲರಾದ ಎಸ್.ಬಿ.ಮುಕ್ಕಣ್ಣಪ್ಪ ವಾದಿಸಿದ್ದರು.

 
 
 
 
 
 
 
 
 
 
 

Leave a Reply