ಧಾರವಾಡ ಕವಿ ಸಮ್ಮೇಳನ ಅಧ್ಯಕ್ಷರಾಗಿ ಡಾ.ಶೇಖರ ಅಜೆಕಾರು ಆಯ್ಕೆ

ಕಾರ್ಕಳ/ಅಜೆಕಾರು: ಕನ್ನಡದ ಮೊದಲ ವಿದ್ಯುನ್ಮಾನ ಕವಿತಾ ಸಂಕಲನ ಸೂರ್ಯ ಶಿಕಾರಿಗೆ ಮುನ್ನ ದ ಕವಿ, ಪತ್ರಕರ್ತ, ಸಾಹಿತಿ ಡಾ.ಶೇಖರ ಅಜೆಕಾರು ಅವರನ್ನು ಧಾರಾವಾಡದ ರಂಗಾಯಣ ಸಭಾಂಗಣದಲ್ಲಿ ೨೯ ರ ಭಾನುವಾರ ನಡೆಯುವ ಅಖಿಲ ಕರ್ನಾಟಕ ದ್ವಿತೀಯ ಕವಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘಟಕ, ಕನಕಶ್ರೀ ಪ್ರಕಾಶನದ ಸಿದ್ರಾಮ ನಿಜಲಗಿ ತಿಳಿಸಿದ್ದಾರೆ.

ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮೂಲಕ ನಾಡಿನ ಗಮನ ಸೆಳೆದ ಅಜೆಕಾರು ಕವಿಗಳಾಗಿಯೂ ಗರುತಿಸಿಕೊಂಡಿದ್ದಾರೆ. ಮೈಸೂರು ಗ್ರಾಮಾಂತರ ಬುದ್ಧಿ ಜೀವಿಗಳ ಸಂಘಟನೆಯ ೩೦ನೇ ವರ್ಷದ ಕವಿ ಸಮ್ಮೇಳನದ ಅಧ್ಯಕ್ಷತೆಯ ಅವಕಾಶ ಪಡೆದ ಅವರು ಮೈಸೂರು ದಸರಾ ಯುವ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ.
೨೭ ಪುಸ್ತಕಗಳನ್ನು ಪ್ರಕಟಿಸಿರುವ ಅವರ ಜೀವನ ಚರಿತ್ರೆ ಅಜೆಕಾರಿನ ಅಜೆಕಾರು ಕಳೆದ ವರ್ಷ ಪ್ರಕಟಗೊಂಡಿದೆ. ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ತುಳುವ ಮಾಧ್ಯಮ ರತ್ನ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಮಾಧ್ಯಮ ಸೇವಾ ರತ್ನ, ಕೃಷಿಕ ಬಂಧು ಸೇರಿದಂತೆ ೧೦೦ ಕ್ಕೂ ಹೆಚ್ಚು ರಾಜ್ಯ- ರಾಷ್ಟ್ರಮಟ್ಟದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಕುಂದಪ್ರಭ, ಕರ್ನಾಟಕ ಮಲ್ಲ, ಜನವಾಹಿನಿ, ದೈಜಿ ವರ್ಲ್ಡ್ ಡಾಟ್ ಕಾಂ, ಕನ್ನಡ ಪ್ರಭ, ಉಷಾ ಕಿರಣ ಸಹಿತ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಜವಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಗೌರವ ಇವರಿಗೆ ಸಂದಿದೆ. ಲೇಖಕರಾಗಿ ಹೊಸ ಹಾದಿಯ ಅನ್ವೇಷಕರಾಗಿ, ಸಂಶೋಧಕರಾಗಿ, ಛಾಯಾಗ್ರಾಹಕರಾಗಿ, ಸಂಘಟಕರಾಗಿ, ಶಿಕ್ಷಣ ತಜ್ಞರಾಗಿ, ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ- ತುಳು ಭಾಷೆಯ ಸಾಹಿತಿಯಾಗಿ, ನಾಡು ನುಡಿಯ ಸೇವಕರಾಗಿ ಖ್ದಾತರಾಗಿದ್ದಾರೆ. ತುಳುನಾಡಿನ ವಿಶೇಷ ಕಂಬಳ ಕ್ರೀಡೆಯ ಕುರಿತ ೫ ಕೃತಿಗಳನ್ನು ಪ್ರಕಟಿಸಿದ್ದಾರೆ. ೩ ವ್ಯಕ್ತಿ ಚಿತ್ರಗಳು ಹತ್ತಾರು ಊರುಗಳ ಕುರಿತ ಅವರ ಕೃತಿಗಳು ಪ್ರಕಟಗೊಂಡಿವೆ. ಸದಾ ಸಾಹಿತ್ಯ , ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸಿ ಯುವಕರಿಗೆ, ಬಾಲಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದನ್ನು ಕರಾವಳಿಯ ವಿವಿಧ ಸಂಘಟನೆಗಳು ಸ್ವಾಗತಿಸಿವೆ.

 
 
 
 
 
 
 
 
 
 
 

Leave a Reply