}ಶ್ರೀಕೃಷ್ಣ ಮಠದ ನಾಮ ಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ~ಕಸಾಪ

ಉಡುಪಿ, ಡಿ.1: ಉಡುಪಿ ಶ್ರೀಕೃಷ್ಣ ಮಠದ ನಾಮ ಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.

ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು. ನಾಮಫಲಕದಲ್ಲಿ ಮೊದಲು ಕನ್ನಡ ಇರಬೇಕು. ಆನಂತರ ಇತರ ಭಾಷೆ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ.

ನಾಮ ಫಲಕದ ಈ ಪ್ರಕರಣ ಸರಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿ ಪಡಿಸುವ ವರೆಗೂ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಸಮಾಜಕ್ಕೆ ಮಾರ್ಗದರ್ಶನ ಮಾಡುವವರೆ ಇಂತಹ ಕುಚೋದ್ಯ ಕೆಲಸಕ್ಕೆ ಕೈ ಹಾಕಿರುವುದು ಕ್ಷಮಿಸಲಾಗದ ಅಪರಾಧ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಸಂಬಂಧಪಟ್ಟವರು ತಕ್ಷಣ ಇದನ್ನು ಸರಿಪಡಿಸಬೇಕು.

ಇದು ಕನ್ನಡ ಸಾಹಿತ್ಯ ಪರಿಷತ್ನ ಹಕ್ಕೊತ್ತಾಯವಾಗಿದೆ. ನಾಮಫಲಕದಲ್ಲಿ ಕನ್ನಡ ಭಾಷೆ ತೆಗೆದು ತುಳು ಭಾಷೆ ಹಾಕಿದ್ದು ಸರಿಯಲ್ಲ. ಬೇರೆ ಭಾಷೆಯನ್ನು ಬೆಳೆಸುವಾಗ ಮೊದಲು ಕನ್ನಡ ವನ್ನೇ ಬಳಸಬೇಕು ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯನ್ನು ಕೈ ಬಿಟ್ಟು ಬೇರೆ ಭಾಷೆಯನ್ನು ಬಳಸಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಮೊದಲು ಕನ್ನಡ. ಆನಂತರ ಇತರೆ ಭಾಷೆ ನಾಮಫಲಕದಲ್ಲಿ ಇರಲಿ.

ಕನ್ನಡ ಮತ್ತು ಸೋದರ ಭಾಷೆ ತುಳುವಿನ ನಡುವೆ ಕಂದಕ ನಿರ್ಮಾಣ ಮಾಡುವುದು ಸಹ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಠದಿಂದ ಸ್ಪಷ್ಟನೆ: ಪರ್ಯಾಯ ಅದಮಾರು ಸ್ವಾಮೀಜಿಯ ಅಭಿಮತದಂತೆ ಮಠದ ಪುನಶ್ಚೇತನ ಗೊಳಿಸುವ ಸಮಯದಲ್ಲಿ ಪ್ಲಾಸ್ಟಿಕ್‌ನಲ್ಲಿದ್ದ ಮುಖ ದ್ವಾರದ ಬೋರ್ಡಿನ ಬದಲು ಮರದ ಬೋರ್ಡ್ ಹಾಕುವ ಯೋಜನೆ ಇತ್ತು.

ಅದರಲ್ಲಿ ಮೊದಲು ಕನ್ನಡ, ನಂತರ ಸಂಸ್ಕೃತ ಮತ್ತು ತುಳು ಲಿಪಿ ಬೋರ್ಡ್ ಗಳನ್ನು ಹಾಕುವುದು ಸ್ವಾಮೀಜಿಗಳ ಅಭಿಪ್ರಾಯವಾಗಿತ್ತು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬೋರ್ಡ್ ತಯಾರು ಮಾಡುವ ಸಂದರ್ಭ ಲಕ್ಷದೀಪ ಬಂದ ಕಾರಣ ಕನ್ನಡ ಬೋರ್ಡ್ ತಯಾರಾಗಿರಲಿಲ್ಲ. ಅದಕ್ಕೆ ಸಂಸ್ಕೃತ ಮತ್ತು ತುಳು ಭಾಷೆಯ ಬೋರ್ಡ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply