ಕಟಪಾಡಿ-: ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಮೂಲ ಕಾರಣವಾದ ಅನುದಾನಿತ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳು ಇಂದು ಸಾಕಷ್ಟು ವಿದ್ಯಾರ್ಥಿಗಳ ಸಂಖ್ಯೆ ಇದ್ದಾಗ್ಯೂ ಅನುದಾನಿತ ಶಿಕ್ಷಕರಿಲ್ಲದೆ ಸರಕಾರಗಳ ನಿರಂತರ ನಿರ್ಲಕ್ಷö್ಯ ಧೋರಣೆಯಿಂದ ಸಂಕಷ್ಟದ ಸ್ಥಿತಿಯಲ್ಲಿವೆ. ವಿದ್ಯಾರ್ಥಿಗಳ ಅನುಪಾತಕ್ಕನುಗುಣವಾಗಿ ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವ ಸರಕಾರ, ದುರ್ಬಲ ವರ್ಗದ ವಿದ್ಯಾರ್ಥಿಗಳೇ ಕಲಿಯುತ್ತಿರುವ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅವಗಣನೆ ಮಾಡುತ್ತಿರುವುದು ಕನ್ನಡಕ್ಕೆ ಮಾಡುವ ಅನ್ಯಾಯವೇ ಆಗಿದೆ. ಸರಕಾರ ಕೂಡಲೇ ಎಚ್ಚೆತ್ತು ಅನುದಾನಿತ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ಅಥವಾ ಅತಿಥಿ ಶಿಕ್ಷಕರನ್ನು ನೇಮಿಸಬೇಕು ಎಂದು ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು, ಹಾಗೂ ಎಸ್.ವಿ.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸತ್ಯೇಂದ್ರ ಪೈ ಹೇಳಿದರು.
ಕಟಪಾಡಿ ಎಸ್ವಿಎಸ್ ಪಪೂ ಕಾಲೇಜಿನಲ್ಲಿ ಶನಿವಾರ ಜರಗಿದ ಕಾಪು ತಾಲ್ಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಈ ನಿರ್ಣಯವನ್ನು ಮಂಡಿಸಿದರು. ಇದನ್ನು ಸಭೆಯಲ್ಲಿದ್ದ ಎಲ್ಲರೂ ಎದ್ದುನಿಂತು ಅಂಗೀಕರಿಸಿ ಈ ಬಗ್ಗೆ ಜನಪ್ರತಿನಿಧಿಗಳು, ಇಲಾಖೆ, ಸರಕಾರಕ್ಕೆ ಹಕ್ಕೊತ್ತಾಯ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಕಾಪು ತಾ| ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷೆ ಕ್ಯಾಥರಿನ್ ರೊಡ್ರಿಗಸ್ ಮಾತನಾಡಿ ದೇಶಕ್ಕೆ ೭೫ರ ಸಂಭ್ರಮ, ಉಡುಪಿ ಜಿಲ್ಲೆಗೆ ೨೫ರ ಸಂಭ್ರಮ, ಸಮ್ಮೇಳನ ನಡೆಯುತ್ತಿರುವ ಈ ವಿದ್ಯಾಲಯಕ್ಕೂ ೭೫ರ ಹರೆಯ, ಈ ವಿದ್ಯಾಲಯದ ಹಳೆವಿದ್ಯಾರ್ಥಿನಿಯಾಗಿದ್ದ ತನಗೆ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದ್ದು ಇದು ಅವಿಸ್ಮರಣೀಯ ಕ್ಷಣವಾಗಿದೆ ಎಂದರು. ದಿನಪೂರ್ತಿ ವೈವಧ್ಯತೆಯಿಂದ ಕೂಡಿದ ಕಾರ್ಯಕ್ರಮಗಳು, ವಿಚಾರಗೋಷ್ಠಿ, ವಿದ್ಯಾರ್ಥಿಕವಿಗೋಷ್ಠಿ ಸಾಧಕರಿಗೆ ಸನ್ಮಾನ, ಕನ್ನಡ ಶಾಲೆಗಳ ಉಳಿವಿಗೆ ಕೈಗೊಂಡ ನಿರ್ಣಯ ಸಕಾಲಿಕವಾಗಿದ್ದು, ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿದೆ ಎಂದರು. ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರನ್ನು ಸಮ್ಮಾನಿಸಲಾಯಿತು. ಕಾಪು ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ| ಸ್ಟೀವನ್ ಕ್ವಾಡ್ರಸ್ ಅವರು ಸಮಾರೋಪ ಭಾಷಣ ಮಾಡಿದರು. ಅದಾನಿ ಯುಪಿಸಿಎಲ್ ಸಂಸ್ಥೆಯ ಅಧ್ಯಕ್ಷರಾದ ಡಾ| ಕಿಶೋರ್ ಆಳ್ವ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿದರು. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರು ಶುಭ ಹಾರೈಸಿದರು.
ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಗುರ್ಮೆ, ಕಟಪಾಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಜಗನ್ನಾಥ ಕೋಟೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೋಶಾಧ್ಯಕ್ಷ ಮನೋಹರ ಪಿ., ಕನ್ನಡ ಭವನ ಸಮಿತಿ ಕಾರ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇಗೌಡ ಡಿ.ಎಚ್., ಶಿಕ್ಷಣ ಸಂಯೋಜಕ ಶಂಕರ್, ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷರಾದ ಡಾ| ದಯಾನಂದ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹಶಿಕ್ಷಕ ವಿವೇಕಾನಂದ ಎನ್. ಸನ್ಮಾನ ಪತ್ರ ವಾಚಿಸಿದರು. ಕಸಾಪ ಸದಸ್ಯರಾದ ಅನಂತ ಮೂಡಿತ್ತಾಯ, ಸಂಘಟನಾ ಕಾರ್ಯದರ್ಶಿ ಕೆ. ರಾಮರಾಯ ಪಾಟ್ಕರ್ ಬಂಟಕಲ್ಲು ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ವಂದಿಸಿದರು. ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು, ಹಾಗೂ ಎಸ್.ವಿ.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸತ್ಯೇಂದ್ರ ಪೈ ಮಾತನಾಡಿದರು.
ಶನಿವಾರ ಕಟಪಾಡಿ ಎಸ್ವಿಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಕಾಪು ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸನ್ಮಾನಿಸಲಾಯಿತು. ಸುಧಾಕರ ಪಾಣಾರ ಮೂಡುಬೆಳ್ಳೆ(ದೈವಾರಾಧನೆ), ಕು.ಸುಮಂಗಳಾ ಕುಲಾಲ್ ಪಂಜಿಮಾರು(ವಿಶೇಷ ಚೇತನ ಪ್ರತಿಭೆ), ಸಂದೀಪ್ ರಾವ್ ಮಟ್ಟು(ಕೃಷಿ), ಡಾ.ಉದಯಕುಮಾರ್ ಶೆಟ್ಟಿ (ವೈದ್ಯಕೀಯ), ಶ್ರೀಮತಿ ರೂಪಾ ಆಚಾರ್ಯ ಪಡುಬಿದ್ರಿ( ಕುಸುರಿ ಕಲೆ), ಪ್ರಕಾಶ್ ಸುವರ್ಣ ಕಟಪಾಡಿ(ಮಾಧ್ಯಮ), ವೆಂಕಟರಮಣ ಭಟ್(ಅಪ್ಪು ಭಟ್) ಇನ್ನಂಜೆ(ಧಾರ್ಮಿಕ), ರಾಜೀವ ತೋನ್ಸೆ(ಯಕ್ಷಗಾನ), ಸುಭಾಸ್ ನಾಯಕ್ ಬಂಟಕಲ್ಲು(ಪುರಾತತ್ವ ಸಂಶೋಧನೆ), ಅನ್ವರ್ ಕಟಪಾಡಿ (ಕ್ರೀಡೆ), ಸಂಘ ಸಂಸ್ಥೆಗಳ ಪರವಾಗಿ ರವಿ ಫ್ರೆಂಡ್ಸ್ ಕಟಪಾಡಿ, ಗಿರಿಬಳಗ ಕುಂಜಾರುಗಿರಿ, ಮಹಿಳಾ ಮಂಡಲ(ರಿ) ಕಟಪಾಡಿ.
ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಕ್ಯಾಥರಿನ್ ರೊಡ್ರಿಗಸ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಅದಾನಿ ಯುಪಿಸಿಎಲ್ ಸಂಸ್ಥೆ ಅಧ್ಯಕ್ಷ ಕಿಶೋರ್ ಆಳ್ವ, ಕಾಪು ಸರಕಾರಿ ಪ್ರ.ದರ್ಜೆ ಕಾಲೇಜಿನ ಪ್ರಾಚಾರ್ಯ ಸ್ಟೀವನ್ ಕ್ವಾಡ್ರಸ್, ಸಮಾರಂಭದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರೇಗೌಡ ಡಿ.ಎಚ್, ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸತ್ಯೇಂದ್ರ ಪೈ, ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ದಯಾನಂದ ಪೈ, ಕಾರ್ಯದರ್ಶಿ ಕೃಷ್ಣಕುಮಾರ್ ಮಟ್ಟು, ದೇವದಾಸ್ ಹೆಬ್ಬಾರ್, ಜಿಲ್ಲಾ ಸಮಿತಿಯ ಕಾರ್ಯದರ್ಶಿ ನರೇಂದ್ರಕುಮಾರ್ ಕೋಟ, ಕೋಶಾಧ್ಯಕ್ಷ ಮನೋಹರ್ ಪಿ. ಮೊದಲಾದವರು ಉಪಸ್ಥಿತರಿದ್ದರು.