ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ನೇಪಾಳದ ಕಠ್ಮಂಡುವಿನಲ್ಲಿದ್ದ ಆತನ ಅಡಗುತಾಣದ ಹೊರಗೆ ಹಂತಕರ ತಂಡವೊಂದು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದೆ.
ಈತ ಭಾರತದಲ್ಲಿ ನಕಲಿ ನೋಟುಗಳನ್ನು ಅತಿ ಹೆಚ್ಚು ಪೂರೈಕೆ ಮಾಡುತ್ತಿದ್ದ ವಿತರಕ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಇದೀಗ ಲಾಲ್ ಮೊಹಮ್ಮದ್ ಗುಂಡಿಕ್ಕಿ ಹತ್ಯೆಗೈದ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಕಠ್ಮಂಡುವಿನ ಗೊತಾಟರ್ ಪ್ರದೇಶದಲ್ಲಿರುವ ತನ್ನ ಮನೆಯ ಮುಂದೆ ಐಷಾರಾಮಿ ಕಾರಿನಲ್ಲಿ ಬಂದ ಲಾಲ್ ಮೊಹಮ್ಮದ್ ಕೆಳಗಿಳಿಯುತ್ತಿದ್ದಂತೆ ಇಬ್ಬರು ಹಂತಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಕಾರಿನ ಹಿಂದೆ ಬಚ್ಚಿಟ್ಟಿಕೊಳ್ಳಲು ಲಾಲ್ ಮೊಹಮ್ಮದ್ ಪ್ರಯತ್ನಿಸಿದರೂ ದುಷ್ಕರ್ಮಿಗಳು ಬಿಟ್ಟುಬಿಡದೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಐಎಸ್ಐ ಏಜೆಂಟ್ ಅನ್ನು ಲಾಲ್ ಮೊಹಮ್ಮದ್ ಅಲಿಯಾಸ್ ಮೊಹಮ್ಮದ್ ದರ್ಜಿ ಎಂದು ಗುರುತಿಸಲಾಗಿದೆ. ಐಎಸ್ಐ ಸೂಚನೆ ಮೇರೆಗೆ ಲಾಲ್ ಮೊಹಮ್ಮದ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುದ್ರಣವಾಗುತ್ತಿದ್ದ ಭಾರತದ ನಕಲಿ ಕರೆನ್ಸಿಗಳನ್ನು ನೇಪಾಳಕ್ಕೆ ಸಾಗಿಸಿ ನಂತರ ಭಾರತದಲ್ಲಿ ತನ್ನ ಏಜೆಂಟರಿಗೆ ನೀಡುತ್ತಿದ್ದ ಎಂದು ಮಾಹಿತಿ ತಿಳಿಯಲಾಗಿದೆ.
ಲಾಲ್ ಮೊಹಮ್ಮದ್ ಐಎಸ್ಐಗೆ ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿದ್ದಲ್ಲದೇ ಸಹಾಯ ಕೂಡ ಮಾಡುತ್ತಿದ್ದನು. ಇದರ ಜೊತೆಗೆ ಐಎಸ್ಐ ಏಜೆಂಟ್ಗಳಿಗೂ ಆಶ್ರಯ ನೀಡಿದ್ದನು ಎಂದು ತಿಳಿಯಲಾಗಿದೆ.
ಇದೇ ವೇಳೆ ಮೊಹಮ್ಮದ್ ಅವರ ಮಗಳು ತಮ್ಮ ತಂದೆಯನ್ನು ರಕ್ಷಿಸಲು ಮನೆಯ ಮೊದಲನೇ ಮಹಡಿಯಿಂದ ಜಿಗಿಯುತ್ತಾರೆ. ಆದರೆ ಅಷ್ಟರಲ್ಲಿ ಆರೋಪಿಗಳು ಮೊಹಮ್ಮದ್ನನ್ನು ಕೊಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕೊಲೆಯನ್ನು ಛೋಟಾ ರಾಜನ್ ಹಾಗೂ ಕರ್ನಾಟಕ ಮೂಲದ ಉದಯ ಶೆಟ್ಟಿ ಹತ್ಯೆಯನ್ನು ಮಾಡಿಸಿದ್ದಾರೆ ಎಂದು ನೇಪಾಳ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ನೇಪಾಳದ ಪತ್ರಿಕೆಯೊಂದು ವರದಿ ಮಾಡಿದೆ.
ಉದಯ ಶೆಟ್ಟಿ ಎಂಬಾತ ಈ ಹಿಂದೆ ನೇಪಾಳದ ಜೈಲಿನ ಒಳಗೆ ಒಂದು ಮುಸ್ಲಿಂ ವ್ಯಕ್ತಿಯನ್ನು ಕೊಲೆಗೈದು ಶಿಕ್ಷೆಗೆ ಒಳಾಗಗಿ ಜೈಲು ಪಾಲಾಗಿದ್ದಾನೆ.ಈ ಕೊಲೆಯು ಕೂಡ ಆತನ ಮೇಲೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.