ಬೆಂಗಳೂರು : ಪಾಲುದಾರಿಕೆಯಲ್ಲಿ ಪತಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಯೂ ಟರ್ನ್ ಡಾಬಾ ಮಾಲೀಕ ಅರ್ಪಿತ್ನ ಪತ್ನಿ ಶೀತಲ್ ಎಂಬಾಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.ಕಳೆದ ತಿಂಗಳು 24ರಂದು ರಾತ್ರಿ ದುಷ್ಕರ್ಮಿಗಳು ಬಂದು ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದನ್ನ ಪ್ರಶ್ನಿಸಲು ಹೋದ ಡಾಬಾದ ಸಿಬ್ಬಂದಿ ಮನೋಜ್ ಎಂಬಾತನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು ಮೂವರು ಆರೋಪಿಗಳಾದ ರೌಡಿಶೀಟರ್ ಮನುಕುಮಾರ್ ಮತ್ತು ಆತನ ಸಹಚರರಾದ ಹೇಮಂತ್ ಹಾಗೂ ಮಂಜುನಾಥನನ್ನ ಬಂಧಿಸಿದ್ದರು.
ಕೆಲ ತಿಂಗಳ ಹಿಂದೆ ಅರ್ಪಿತ್ ಹಾಗೂ ಶೀತಲ್ ಮದುವೆಯಾಗಿತ್ತು. ಪ್ರಾರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ಕಾಲಕ್ರಮೇಣ ಕೌಟುಂಬಿಕ ಕಾರಣಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ನಿತ್ಯ ಜಗಳವಾಗುತಿತ್ತು. ಈ ಹಿನ್ನೆಲೆ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಬಂದಿದ್ದ. ಹಲವು ದಿನಗಳಾದರೂ ಹೆಂಡ್ತಿ ನೋಡಲು ಹೋಗದೆ ಡಾಬಾ ವ್ಯವಹಾರದಲ್ಲಿ ಮಗ್ನನಾಗಿದ್ದ.
ಇದರಿಂದ ಅಸಮಾಧಾನಗೊಂಡು ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಶೀತಲ್, ತನ್ನ ಸ್ನೇಹಿತ ರೌಡಿಶೀಟರ್ ಮನುಕುಮಾರ್ಗೆ ₹20 ಸಾವಿರಕ್ಕೆ ಸುಪಾರಿ ನೀಡಿದ್ದಳು. ಡಾಬಾಗೆ ಬೆಂಕಿ ಹಚ್ಚಿದರೆ ಅರ್ಪಿತ್ಗೆ ಬುದ್ಧಿ ಬರುತ್ತದೆ ಎಂಬ ಪ್ಲಾನ್ ಮಾಡಿದ್ದಳು. ಪ್ಲಾನ್ನಂತೆ ಮನು ಸುಪಾರಿ ತೆಗೆದುಕೊಂಡಿದ್ದ. ಈತನ ಸಹಚರರಿಗೆ ಹಣ ಕೊಟ್ಟು ಬೆಂಕಿ ಹಚ್ಚುವ ಸಂಚು ರೂಪಿಸಿದ್ದ ಎನ್ನಲಾಗಿದೆ.