ಕೊಡವೂರು ವಾರ್ಡಿನಲ್ಲಿ ಪ್ರತೀ ತಿಂಗಳಿನಂತೆ ದುಡಿಯಲು ಆಗದ ದಿವ್ಯಾಂಗರಿಗೆ ( ಅಂಗವಿಕಲರಿಗೆ) ಅಕ್ಕಿ ವಿತರಣೆ ಕಾರ್ಯಕ್ರಮ ಮತ್ತು ದಿವ್ಯಾಂಗರ ಮನೆಯ ಶೌಚಾಲಯ ನಿರ್ಮಾಣಕ್ಕೆ ಶ್ರಮದಾನದ ಮೂಲಕ ಕೆಲಸ ಮತ್ತು ದಾನಿಗಳಿಂದ ಪಡೆದ ಸಹಾಯ ಧನ ವಿತರಣೆ ಮಾಡಲಾಯಿತು. ಸ್ವಂತ ಉದ್ಯೋಗ ಮಾಡ ಬಯಸುವ ದಿವ್ಯಾಂಗರಿಗೆ ಸರಕಾರದಿಂದ ಮತ್ತು ದಾನಿಗಳ ಸಹಾಯದಿಂದ ಬೇಕಾಗುವ ಸಾಮಗ್ರಿಗಳನ್ನು ಕೊಡಿಸುವ ಕಾರ್ಯ ಕೊಡವೂರು ವಾರ್ಡಿನ ನಗರ ಸಭಾ ಸದಸ್ಯರಾದ ಕೆ. ವಿಜಯ್ ಕೊಡವೂರು ಇವರ ಮುಂದಾಳತ್ವದಲ್ಲಿ ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಇವರ ವತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ಅಂಗವಿಕಲರ ಶ್ರೇಯಸ್ಸಿಗೆ ದುಡಿದ ಅಂಗವಿಕಲರ ಕಲ್ಯಾಣ ಅಧಿಕಾರಿಯಾಗಿದ್ದ ಶ್ರೀ ಚಂದ್ರ ನಾಯಕ್ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಂಗವಿಕಲರ ಸಂಘದ ಅಧ್ಯಕ್ಷರಾದ ಡಾ. ಮುರುಳಿಧರ್ ನಾಯಕ್ ರನ್ನು ಗೌರವಿಸುವ ಕಾರ್ಯಕ್ರಮವು ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕೆ. ವಿಜಯ್ ಕೊಡವೂರು ವಿಕಲ ಚೇತನರು ಸಮಾಜದ ಆಸ್ತಿ , ಈ ಆಸ್ತಿಯನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ವಿಕಲ ಚೇತನರಿಗೆ ಧೈರ್ಯ ತುಂಬಿ ಗೌರವಯುತವಾದ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಟ್ಟಲ್ಲಿ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಇರುವಂತೆ ಮಾಡಲು ಸಾಧ್ಯ. ವಿಕಲ ಚೇತನರ ಬಗ್ಗೆ ಕೇವಲ ಅನುಕಂಪ ವ್ಯಕ್ತ ಪಡಿಸದೆ ಅವರು ಸ್ವಾವಲಂಬಿ ಜೀವನ ನಡೆಸಲು ನೆರವಾಗೋಣ ಎಂದು ಹೇಳಿದರು.
ಬಂದಿರುವ ಎಲ್ಲಾ ವಿಕಲ ಚೇತನರಿಗೆ ಕಿಟ್ ನೀಡಲಾಯಿತು. ಯು.ಡಿ.ಐ.ಡಿಕಾರ್ಡ್ ಮಾಡಿಕೊಡಲಾಯಿತು. ಉಪಸ್ಥಿತರಿದ್ದ ದಾನಿಗಳಾದ ಸುಭಾಸ್ ಮೇಂಡನ್ ಜುಮಾದಿ ನಗರ ಕೊಡವೂರು, ದಯಾನಂದ್ ಕುಂದರ್ ಲಕ್ಷ್ಮೀನಗರ, ದಿವ್ಯಾಂಗ ರಕ್ಷಣಾ ಸಮಿತಿಯ ಪ್ರಮುಖ್ ಹರೀಶ್ ಕೊಪ್ಪಲ್ ತೋಟ , ಸ್ಪಂದನ ವಿಕಲ ಚೇತನರ ಶಾಲೆಯ ಮುಖ್ಯಸ್ಥ ಜನಾರ್ಧನ್ ಉಪ್ಪೂರು. ಹರೀಶ್ ಕೊಪ್ಪಲ್ ತೋಟ ಸ್ವಾಗತಿಸಿ, ಸಹ ಪ್ರಮುಖ್ ಅಜಿತ್ ಬನ್ನಂಜೆ ಧನ್ಯವಾದ ತಿಳಿಸಿದರು.