ಅಯೋಧ್ಯಾ ದಿಗ್ವಿಜಯ ಯಾತ್ರೆಗೆ ಉಡುಪಿಯಲ್ಲಿ ಭರ್ಜರಿ ಸ್ವಾಗತ

ಅಯೋಧ್ಯೆ ಪ್ರಭು ಶ್ರೀರಾಮಚಂದ್ರ ದಿಗ್ವಿಜಯ ಯಾತ್ರೆ ಅಕ್ಟೋಬರ್ 5 ತಾರೀಕಿನಂದು ಯೋಗಿ ಆದಿತ್ಯನಾಥರಿಂದ ಚಾಲನೆಗೊಂಡು 60 ದಿನಗಳಲ್ಲಿ 27 ರಾಜ್ಯಗಳಲ್ಲಿ 15.000 ಕಿ.ಮೀ. ಕ್ರಮಿಸಿ ನವೆಂಬರ್ 7 ತಾರೀಕಿನಂದು ಉಡುಪಿ ಜಿಲ್ಲೆಗೆ ಆಗಮಿಸಿದಾಗ ಉಡುಪಿಯ ಸಂತೆಕಟ್ಟೆ ಜಂಕ್ಷನ್ ನಲ್ಲಿ ಉಡುಪಿ ಜಿಲ್ಲಾ ದಿಗ್ವಿಜಯ ಯಾತ್ರಾ ಸಮಿತಿಯ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಸಂತೆಕಟ್ಟೆಯಲ್ಲಿ ಅಯೋಧ್ಯೆ ರಥದಿಂದ ಬಂದಿಳಿದ ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಶ್ರೀ ಶ್ರೀ ಶಕ್ತಿ ಶಾಂತಾನಂದ ಮಹರ್ಷಿಯವರು ಧ್ವಜಾರೋಹಣ ಮಾಡಿದರು.ತದನಂತರ ಗೋಪೂಜೆ ಮಾಡಿ ಗೋಮಾತೆಯ ಆಶೀರ್ವಾದ ಪಡೆದರು. ರಥದಲ್ಲಿ ಬಂದಂತಹ ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರನ್ನು ಪೂರ್ಣಕುಂಭ ದೊಂದಿಗೆ ಮಾತೆಯರು ಸ್ವಾಗತ ಮಾಡಿ, ಬಂದಂತಹ ಎಲ್ಲಾ ಸದ್ಭಕ್ತರು ಪಾವನಮೂರ್ತಿಗೆ ಕ್ಷೀರಾಭಿಷೇಕ ಮಾಡಿದರು.

ಈ ಪ್ರಯುಕ್ತ ಏರ್ಪಡಿಸಲಾಗಿದ್ದ ಧಾರ್ಮಿಕ ಸಭಾಕಾರ್ಯದಲ್ಲಿ ಉಡುಪಿ ಪೇಜಾವರ ಮಠದ ಮಠಾಧೀಶರೂ ಅಯೋಧ್ಯೆ ಶ್ರೀ ರಾಮ ಮಂದಿರದ ವಿಶ್ವಸ್ಥರೂ ಆಗಿರುವ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಾಶೀರ್ವಚನ ಮಾಡಿದರು. ಹಾಗೆಯೇ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಸಂಸ್ಕ್ರತಿ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕಲಿಸಲಾಗುವ ವೇದ ಶಿಕ್ಷಣ ಸಂಸ್ಥಾನಕ್ಕೆ ಪೇಜಾವರ ಶ್ರೀಗಳು ಚಾಲನೆ ನೀಡಿದರು.ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಶಕ್ತಿ ಶಾಂತಾನಂದ ಮಹರ್ಷಿಗಳು ಮಾತನಾಡಿ ಹಿಂದೂ ಎನ್ನುವುದು ಧರ್ಮ ಅಲ್ಲ,ಹಿಂದೂ ಅಂದರೆ ಸಂಸ್ಕ್ರತಿ. ಈ ಸಂಸ್ಕ್ರತಿಯನ್ನು ಬೆಳೆಸಬೇಕಾದರೆ ನಾವು ರಾಮನ ಆದರ್ಶವನ್ನು ಪಾಲಿಸಬೇಕು.ಮುಂದಿನ ಪೀಳಿಗೆಗೆ ನಮ್ಮ ಸಂಸ್ಕ್ರತಿಯು ತಿಳಿಯಬೇಕಾದರೆ ಶಾಲೆಯ ಪಠ್ಯಪುಸ್ತಕದಲ್ಲಿ ಅಗತ್ಯವಾಗಿ ರಾಮಾಯಣದ ಕಥೆಗಳನ್ನು ಪ್ರಕಟಿಸಬೇಕು.ರಾಮಾಯಣದ ಬಗ್ಗೆ ಯಾರಿಗೂ ಕೂಡಾ ಕೀಳರಿಮೆ ಬರಬಾರದು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರಾದ ಕಲ್ಲಡ್ಕ ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ ಮಾಡಿದರು.
ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷರುಗಳಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ,ಪುರುಷೋತ್ತಮ ಶೆಟ್ಟಿ, ಹರಿಯಪ್ಪ ಕೋಟ್ಯಾನ್,ಮಹಿಳಾ ಪ್ರಮುಖೆ ತಾರಾ ಉಮೇಶ್ ಆಚಾರ್ಯ, ಉಪಸ್ಥಿತರಿದ್ದರು.ಸಮಿತಿಯ ಅಧ್ಯಕ್ಷರಾದ ಆನಂದ ಶೆಟ್ಟಿ ಲಕ್ಷ್ಮೀನಗರ ಇವರು ಅಧ್ಯಕ್ಷತೆ ವಹಿಸಿದ್ದು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ವಿಜಯ ಕೊಡವೂರು ಪ್ರಾಸ್ತಾವಿಕ ಮಾತನಾಡಿ,ಸಂಘಟನಾ ಕಾರ್ಯದರ್ಶಿ ವಂದನಾರ್ಪಣೆ ಮಾಡಿದರು.ದಾಮೋದರ್ ಶರ್ಮಾ ನಿರೂಪಣೆ ಮಾಡಿದರು. ಮಾಯಾ ಕಾಮತ್ ಮತ್ತು ಬಳಗದವರು ಪ್ರಾರ್ಥಿಸಿದರು..
ವೇದಿಕೆಯಲ್ಲಿ ಅಯೋಧ್ಯೆಯಲ್ಲಿ ಕರಸೇವೆ ಮಾಡಿದ ಉಡುಪಿ ಭಾಗದ ಕರಸೇವಕರನ್ನು ಗುರುತಿಸಲಾಯಿತು.
ಧಾರ್ಮಿಕ ಸಭಾಕಾರ್ಯಕ್ರಮದ ಬಳಿಕ ಸಂತೆಕಟ್ಟೆಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಬೈಕ್, ಕಾರು,ಭಜನಾ ತಂಡಗಳು,ಚೆಂಡೆವಾದ್ಯ,ಟ್ಯಾಬ್ಲೋಗಳೊಂದಿಗೆ ಶ್ರೀ ರಾಮನ ದಿಗ್ವಿಜಯ ರಥಯಾತ್ರೆಯು ಸಾಗಿತು.ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಮಾಜಸೇವಕರಾದ. ನಾಡೋಜ ಡಾ.ಜಿ.ಶಂಕರ್ ರವರು ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ಹಾಗೂ ಸರ್ವ ಸದಸ್ಯರು ಸೇರಿಕೊಂಡು ಅಲ್ಲಿಯೂ ಪೂರ್ಣಕುಂಭ ಸ್ವಾಗತ ಕೋರಿ ತಾಯಿ ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಜಾಥಾದಲ್ಲಿ ಬಂದಂತಹ ಸುಮಾರು 4500 ಭಕ್ತಾಧಿಗಳು ಅನ್ನಪ್ರಸಾದ ಸ್ವೀಕಾರ ಮಾಡಿ ದಿಗ್ವಿಜಯ ರಥಯಾತ್ರೆಯನ್ನು ಬೀಳ್ಕೊಡಲಾಯಿತು.

 
 
 
 
 
 
 
 
 
 
 

Leave a Reply