ಉಚಿತ ಬೃಹತ್ ದಂತ ಚಿಕಿತ್ಸಾ ಶಿಬಿರ

ಆದಿತ್ಯ ಟ್ರಸ್ಟ್ (ರಿ ). ನಕ್ರೆ ಕಾರ್ಕಳ, ಶಾಂತಿ ಯುವಕ ವೃಂದ ಜಾರ್ಕಳ ಕುಕ್ಕುಂದೂರು ಇವರ ಪ್ರಾಯೋಜಕತ್ವದಲ್ಲಿ, ಹಳೆ ವಿದ್ಯಾರ್ಥಿ ಸಂಘ ಬಸ್ರಿ ಬೈಲೂರು ಇವರ ಸಹ ಪ್ರಾಯೋಜಕತ್ವದಲ್ಲಿ, ಕಾಮಧೇನು ಹಾಲು ಉತ್ಪಾದಕರ ಸಹಕಾರಿ ಸಂಘ, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಜಾರ್ಕಳ ಸಿರಿ ಭಜನಾ ಮಂಡಳಿ ಜಾರ್ಕಳ, ಇವರ ಸಂಯುಕ್ತ ಆಶ್ರಯದಲ್ಲಿ, ಮಣಿಪಾಲ ಕೆ ಎಂ ಸಿ ದಂತ ಮಹಾವಿದ್ಯಾಲಯದ ತಜ್ಞ ವೈದ್ಯ ತಂಡದವರಿಂದ ಉಚಿತ ದಂತ ಚಿಕಿತ್ಸಾ ಶಿಬಿರವು 04-12-2022ರಂದು ಬಾಲಾಜಿ ಎಕ್ಸ್ಪೋರ್ಟ್ ಸಭಾಂಗಣ ಜಾರ್ಕಳ ಇಲ್ಲಿ ಜರಗಿತು. ದಂತ ಚಿಕಿತ್ಸಾ ಶಿಬಿರವನ್ನು ಶ್ರೀ ಜೆ. ಮೋಹನದಾಸ ಶೆಟ್ಟಿ, ಆಡಳಿತ ಮುಕ್ತೇಸರರು, ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡುತ್ತ, ವ್ಯಕ್ತಿಗೆ ಆರೋಗ್ಯವೆನ್ನುವುದು ಬಹು ಮುಖ್ಯವಾದದ್ದು. ಆರೋಗ್ಯ ಪೂರ್ಣವಾಗಿ ಬದುಕಬೇಕೆಂದರೆ ದೇಹದ ಎಲ್ಲಾ ಭಾಗಗಳು ಸರಿಯಾದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಬೇಕು. ಆರೋಗ್ಯವಂತ ದಂತವು ಮುಖದ ಅಂದವನ್ನು ಹೆಚಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಎಲ್ಲರಿಗೂ ಆರೋಗ್ಯದಾಯಕ ಬದುಕು ದೊರಕಲಿ ಎಂದು ಹಾರೈಸಿದರು. ಕೆ. ಎಂ. ಸಿ. ಮಹಾವಿದ್ಯಾಲಯದ ದಂತ ವೈದ್ಯ ಡಾ/ ಶ್ರೀಧರ ಆಚಾರ್ಯ ಇವರು ಮಾತನಾಡುತ್ತ, ತಂಬಾಕು ಸೇವನೆ, ಧೂಮಪಾನ, ಜರ್ಧ ಜಗಿಯುವುದು ಇತ್ಯಾದಿಗಳಿಂದ ಬಾಯಿ ಕ್ಯಾನ್ಸರ್ ರೋಗ ಬರುತ್ತದೆ. ಇದು ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಇದರಿಂದ ಬಾಯಿಯಲ್ಲಿರುವ ದಂತಗಳು ಕೆಟ್ಟು ಹೋಗಿ ಆರೋಗ್ಯ ಕೆಟ್ಟುಹೋಗುವ ಸಂಭವ ಹೆಚ್ಚು. ಅದಕ್ಕಾಗಿ ಪ್ರತಿ ವರ್ಷಕ್ಕೊಮ್ಮೆ ದಂತ ತಪಾಸಣೆ ಮಾಡುವುದರ ಮೂಲಕ ಆರೋಗ್ಯವಂತ ದಂತವನ್ನು ಕಾಪಾಡಿಕೊಳ್ಳಬಹುದು ಎಂದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಇದರ ಹಳೆ ವಿದ್ಯಾರ್ಥಿ ಶ್ರೀ ಆನಂದ ಮಾಸ್ಟರ್ ಇವರು ಮಾತನಾಡುತ್ತ, ಆದಿತ್ಯ ಟ್ರಸ್ಟ್ ಸಮುದಾಯದಲ್ಲಿ ವಿಕಲ ಚೇತನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಜಾರ್ಕಳದಲ್ಲಿ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿರುವುದು ಉತ್ತಮವಾದ ಕಾರ್ಯ ಎಂದರು. ಆದಿತ್ಯ ಟ್ರಸ್ಟಿನ ಅಧ್ಯಕ್ಷ ಶ್ರೀ ಮಂಜುನಾಥ ತೆಂಕಿಲ್ಲಾಯ ಇವರು ಮಾತನಾಡುತ್ತ, ಟ್ರಸ್ಟಿನ ಮೂಲಕ ಈಗಾಗಲೇ ನಕ್ರೆಯಲ್ಲಿ ಫಿಸಿಯೋ ಥೆರಫಿ ಚಿಕಿತ್ಸೆ ಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ವಿಕಲ ಚೇತನ ಬಂಧುಗಳಿಗೆ ಅಗತ್ಯವುಳ್ಳ ಸಾಧನ ಸಲಕರಣೆಗಳನ್ನು ಸಮಾಜದಿಂದ ಸಂಗ್ರಹಿಸಿ ಒಂದು ಸಂಪನ್ಮೂಲ ಕೇಂದ್ರದಲ್ಲಿ ಸಂಗ್ರಹಿಸಿಟ್ಟು ಆರ್ಥಿಕವಾಗಿ ದುರ್ಬಲರಾದವರಿಗೆ ಉಚಿತವಾಗಿ ಕೊಟ್ಟು ಅವರನ್ನು ಪುನಃಚೇತನಗೊಳಿಸುವ ಯೋಜನೆ ಇದೆ. ಅದಕ್ಕಾಗಿ ಸಮಾಜದಲ್ಲಿರುವ ಎಲ್ಲರ ಸಹಕಾರ ಬೇಕು ಎಂದರು. ಶಿಬಿರದಲ್ಲಿ ಭಾಗವಹಿಸಿದ ಕೆ ಎಂ ಸಿ ತಂಡದ ಎಲ್ಲಾ ವೈದ್ಯರನ್ನು ಶಾಲು ಹೊದಿಸಿ ಪುಷ್ಪ ನೀಡಿ ಗೌರವಿಸಲಾಯಿತು. ಶ್ರೀ ವರದರಾಜ ನಾಯಕ್ ಉದ್ಯಮಿ ಇವರು ತಮ್ಮ ಬಾಲಾಜಿ ಎಕ್ಸ್ಪೋರ್ಟ್ ಸಭಾಂಗಣವನ್ನು ಒದಗಿಸಿಕೊಟ್ಟು ಶಿಬಿರವು ಯಶಸ್ವಿಯಾಗಿ ಜರಗುವಲ್ಲಿ ಸಹಕಾರ ನೀಡಿದರು. ಶ್ರೀ ಸದಾನಂದ ಸಾಲಿಯಾನ್ ವಕೀಲರು ಇವರು ಎಲ್ಲರನ್ನು ಸ್ವಾಗತಿಸಿದರು. ಹರೀಶ್ ಆಚಾರ್ಯ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ರಮೇಶ್ ಮತ್ತು ಶಿಶಿರ್ ಶೆಟ್ಟಿ ಜಾರ್ಕಳ ಇವರು ಶಿಬಿರವನ್ನು ಸಂಯೋಜಿಸಿದ್ದರು. ಸುಮಾರು 81ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

 
 
 
 
 
 
 
 
 
 
 

Leave a Reply