ನಾಲ್ವರು ಅಂತರ್ ರಾಜ್ಯ ವಂಚಕರ ಬಂಧನ

ಉಡುಪಿ: ನಗರದಲ್ಲಿ ವಯಸ್ಸಾದ ಒಂಟಿ ಮಹಿಳೆ, ಪುರುಷರನ್ನು ಗುರಿಯಾಗಿಸಿದ್ದ ಇರಾನಿ ಗ್ಯಾಂಗ್‌ನ ನಾಲ್ವರು ಅಂತರ್ ರಾಜ್ಯ ವಂಚಕರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 7ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶ್ರೀರಾಮಪುರ ನಿವಾಸಿಗಳಾದ ಜಾಕೀರ್ ಹುಸೇನ್ (26), ಕಂಬರ್ ರಹೀಂ ಮಿರ್ಜಾ (32), ಅಕ್ಷಯ್ ಸಂಜಯ್ ಗೋಸಾವಿ (22) ಮತ್ತು ಶಾಹರುಖ್ ಬಂದೆನವಾಜ್ ಶೇಖ್ (24) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ದಿಲ್ಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು ಅಥವಾ ಗಂಡಸರು ನಡೆದುಕೊಂಡು ಹೋಗುವಾಗ ಅವರಿಗೆ ನಾವು ಪೊಲೀಸರು, ಮುಂದೆ ಗಲಾಟೆ ಆಗಿದೆ, ಚಿನ್ನಾಭರಣ ಬ್ಯಾಗಿ ನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ ಅವರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಬ್ಯಾಗಿನಲ್ಲಿ ಹಾಕಿಕೊಡುವುದಾಗಿ ನಂಬಿಸಿ, ಅವರಿಗೆ ತಿಳಿಯದಂತೆ ಚಿನ್ನಾಭರಣವನ್ನು ಮೋಸದಿಂದ ಲಪಟಾಯಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ನಡೆಸಿದ ಕೃತ್ಯಗಳಲ್ಲಿ ಉಡುಪಿ ನಗರ -1, ಕುಂದಾಪುರ -1, ವಿಜಯಪುರದಲ್ಲಿ 4, ಚಿಕ್ಕಮಗಳೂರಿನಲ್ಲಿ 1, ಬಂಟ್ವಾಳ ದಲ್ಲಿ 1, ಮಂಗಳೂರು ಉರ್ವಾ ಪೊಲೀಸ್ ಠಾಣೆಯಲ್ಲಿ 1 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಇನ್ನೂ ಹಲವಾರು ಕಡೆಗಳಲ್ಲಿ ಇದೇ ರೀತಿ ಕೃತ್ಯಗಳನ್ನು ನಡೆಸಿದ್ದಾರೆ.
ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಸ್ಥಳದ ಬಳಿ ಅ. 14ರಂದು ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್. ಅವರು ಖಚಿತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿಸುವ ವೇಳೆ ಆರೋಪಿ ಗಳಲ್ಲಿ ಮಂಗಳೂರಿನಲ್ಲಿ ನಡೆಸಿದ ಕೃತ್ಯದ 12 ಗ್ರಾಂ ತೂಕದ ಚಿನ್ನದ ಚೈನ್ ಯಥಾಸ್ಥಿತಿಯಲ್ಲಿತ್ತು. ಕೃತ್ಯಕ್ಕೆ ಬಳಸಿದ ಚಾವರ್‌ಲೆಟ್ ಬೀಟ್ ಕಾರು ಮತ್ತು ಹೊಂಡಾ ಶೈನ್ ಬೈಕ್ ಹಾಗೂ 2 ಹೆಲ್ಮೆಟ್ ಮತ್ತು 5,100 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬಳಿಕ ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಂಡು, ಇವರು ಮೋಸ ಮಾಡಿ ತೆಗೆದುಕೊಂಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ಶ್ರೀರಾಮ್‌ ಪುರ ಎಂಬಲ್ಲಿನ ಚಿನ್ನದ ಅಂಗಡಿಯಿಂದ 65 ಗ್ರಾಂ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 7ಲಕ್ಷ ರೂ. ಆಗಬಹುದೆಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಯು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ್ ಎನ್. ಐ.ಪಿ.ಎಸ್ ರವರ ನಿರ್ದೇಶ ನದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರ ಚಂದ್ರ ಕೆ.ಎಸ್.ಪಿ.ಎಸ್ ಹಾಗೂ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಟಿ.ಆರ್.ಜೈಶಂಕರ್ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ, ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಶ್ರೀ ಮಂಜಪ್ಪ ಡಿ.ಆರ್ ಮತ್ತು  ಸಿಬ್ಬಂದಿಯವರು ಹಾಗೂ ಉಡುಪಿ ನಗರ ಠಾಣೆಯ ಪಿಎಸ್‌‌ಐಗಳಾದ ಸಕ್ತಿವೇಲು.ಇ, ಮತ್ತು ಕುಂದಾಪುರ ಠಾಣಾ ಪಿ.ಎಸ್.ಐ ಸದಾಶಿವ ಗವ ರೋಜಿ, ಸಿಬ್ಬಂದಿಯವರಾದ ಎ.ಎಸ್.ಐ ಸುಧಾಕರ ಹೆಚ್‌‌ಸಿ ,ಲೋಕೇಶ್,ರಿಯಾಝ್,ಅಹ್ಮದ್, ಹೆಚ್.ಸಿ  ಮಂಜುನಾಥ, ಹೆಚ್.ಸಿ,  ಸಂತೋಷ್ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

 

 

 
 
 
 
 
 
 
 
 

Leave a Reply