ಪತ್ನಿ, ಮಕ್ಕಳನ್ನು ಬಾವಿಗೆ ತಳ್ಳಿ ತಾನು ಆತ್ಮಹತ್ಯೆಗೆ ಯತ್ನ

ಮಂಗಳೂರು: ಕಿನ್ನಿಗೋಳಿ ಸಮೀಪದ ಹೊಸಕಾವೇರಿ ಬಳಿ ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆಸೆದು ತಾನು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ನಡೆದಿದ್ದು ಬಾವಿಗೆ ಬಿದ್ದ ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಿನ್ನಿಗೋಳಿ ಸಮೀಪದ ಹೊಸಕಾವೇರಿ ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ (46) ಎಂಬಾತ ಮೊದಲು ತನ್ನ ಮಕ್ಕಳಾದ ರಶ್ಮಿತಾ,(13) ಉದಯ (11), ದಕ್ಷ(4) ಎಂಬವರನ್ನು ಬಾವಿಗೆಸೆದು ಬಳಿಕ ಪತ್ನಿ ಲಕ್ಷ್ಮಿ(38) ಎಂಬವರನ್ನು ಬಾವಿಯೊಳಗೆ ದೂಡಿ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿ ಬಾವಿಗೆ ಹಾರಿದ್ದಾನೆ.

ಇದನ್ನು ಗಮನಿಸಿದ ಸ್ಥಳೀಯರು ಪತಿ ಮತ್ತು ಪತ್ನಿಯನ್ನು ಬಳಿಕ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಮಕ್ಕಳು ಆಸ್ಪತ್ರೆಗೆ ಸಾಗಿಸುವಾಗಲೇ ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ಮಕ್ಕಳಲ್ಲಿ ರಶ್ಮಿತಾ ಕಟೀಲು ಶಾಲೆಗೆ ಎಂಟನೇ ತರಗತಿ ಈ ಬಾರಿ ಸೇರಿದ್ದು, ಉದಯ ಪುನರೂರು ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದು, ದಕ್ಷತ್ ಪದ್ಮನೂರು ಅಂಗನವಾಡಿ ಶಾಲೆಗೆ ಹೋಗುತ್ತಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್, ಎಸಿಪಿ ಮಹೇಶ್ ಕುಮಾರ್, ಮುಲ್ಕಿ ಇನ್‌ ಸ್ಪೆಕ್ಟರ್‌ ಕುಸು ಮೋಧರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 
 
 
 
 
 
 
 
 
 
 

Leave a Reply