ಬ್ರಹ್ಮಾವರ:ಮಂದಾರ್ತಿ ಸಮೀಪ ಹೆಗ್ಗುಂಜೆಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ನಿರ್ಜನ ಪ್ರದೇಶದ ಕಾಡಿನ ರಸ್ತೆಯಲ್ಲಿ ಸುಟ್ಟುಹೋದ ಕಾರು ಹಾಗೂ ಎರಡು ಮೃತದೇಹ ಪತ್ತೆಯಾಗಿದೆ.
ಭಾನುವಾರ ಮುಂಜಾನೆ 3.30 ಗಂಟೆ ಸುಮಾರಿಗೆ ಬೆಂಕಿ ಹೊತ್ತಿ ಉರಿಯುವುದನ್ನು ನೋಡಿದ ಸ್ಥಳೀಯರು ವಿದ್ಯುತ್ ಅವಘಡ ಆಗಿರಬಹುದೇ ಎಂದು ಎದ್ದು ಬಂದು ನೋಡಿದರೆ ಹೊತ್ತಿ ಉರಿಯುವ ಕಾರು ಪತ್ತೆಯಾಗಿದೆ.
ಕಾರಿನೊಳಗೆ ಬೆಂಕಿಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ಓರ್ವ ಸದಸ್ಯ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬ್ರಹ್ಮಾವರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಮೃತದೇಹಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಯಶವಂತ ಮತ್ತು ಜ್ಯೋತಿ ಮಂಗಳೂರಿನಲ್ಲಿ ಮೂರು ದಿನಗಳ ಹಿಂದೆ ಬಾಡಿಗೆ ಮನೆ ಮಾಡಿದ್ದರು ಎಂದು ಹೇಳಲಾಗಿದೆ.5000 ರೂಪಾಯಿ ಪಾವತಿಸಿ ಆಧಾರ್ ಕಾರ್ಡ್ ದಾಖಲೆ ಕೊಟ್ಟು ಬಾಡಿಗೆ ಕಾರು ಪಡೆದಿದ್ದರು.
ಆನ್ ಲೈನ್ ಮೂಲಕ ಕಾರ್ ಬುಕ್ ಮಾಡಿದ್ದ ಯಶವಂತ ಮತ್ತು ಜ್ಯೋತಿ ಬಂದು ಕಾರು ಪಡೆದು ಹೋಗಿದ್ದರು ಎನ್ನಲಾಗಿದೆ.