ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹದ ಆರೋಪಿಗಳ ಶೀಘ್ರ ಪತ್ತೆಗೆ ಸಂಸದೆ ಶೋಭಾ ಆಗ್ರಹ

ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹಗಳನ್ನು ಬರೆದು ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಸುತ್ತಿರುವವರ ಹಿಂದಿರುವ ಶಕ್ತಿಯನ್ನು ಪತ್ತೆ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದೇವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಂಗಳವಾರ ಕಡೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಡೆಮೇಲೆ ಬರೆದಿರುವುದು ಒಂದು ಭಾಗವಾದರೆ, ಅಂತ ಯೋಚನೆ ಯಾರಲ್ಲಿದೆ? ಯಾರು ಈ ರೀತಿ ತಲೆ ಕಡಿಯುವ ಮಾತನಾಡುತ್ತಾರೆ ಅಂತವರಿಗೆ ಇದು ಭಾರತ ಎನ್ನುವ ಎಚ್ಚರಿಕೆ ಕೊಡಬೇಕು. ತಕ್ಷಣ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಬೇಕು. ಅವರಿಗೆ ಉಗ್ರವಾದ ಶಿಕ್ಷೆ ಕೊಡಬೇಕು. ಆ ರೀತಿ ಕಾನೂನನ್ನು ಕರ್ನಾಟಕದಲ್ಲಿ ಜಾರಿ ಮಾಡಬೇಕೆಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ತಾಲಿಬಾನಿ ಉಗ್ರರು ಸಿರಿಯಾದಲ್ಲಿ ಮಾತ್ರ ಸೀಮಿತವಾಗಿಲ್ಲ. ಅವರು ಮಂಗಳೂರಿನಂತಹ ಕರಾವಳಿ ಜಿಲ್ಲೆಗಳಿಗೂ ಕಾಲಿಡುತ್ತಿದ್ದಾರೆ ಎನ್ನುವುದಕ್ಕೆ ಈ ಗೋಡೆ ಬರಹಗಳು ಸಾಕ್ಷಿಯಾಗಿವೆ. ತಪ್ಪು ಮಾಡಿದವನಿಗೆ ತಲೆ ಕಡಿಯುವ ಶಿಕ್ಷೆ ಎಂದು ಗೋಡೆ ಬರಹ ಹೇಳುತ್ತಿದೆ. ಇದು ತಾಲಿಬಾನಿಗಳ ಆಲೋಚನೆ ಮತ್ತು ವಾದ. ಇಂದು ನಮ್ಮ ರಾಜ್ಯಕ್ಕೆ ಬರುತ್ತಿದೆ ಎಂದರು.

ಇನ್ನು ಮಂಗಳೂರಿನಲ್ಲಿ ಎರಡನೇ ಬಾರಿ ಗೋಡೆ ಬರಹ ಮರುಕಳಿಸಲು ಪೊಲೀಸ್‍ ಇಲಾಖೆಯ ವೈಫಲ್ಯ ಕಾರಣವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸರ ಸಂಖ್ಯೆ ಕಡಿಮೆ ಇರುತ್ತದೆ. ಪದೇ ಪದೇ ಎಲ್ಲಾ ಬೀದಿಗಳಲ್ಲಿ ಓಡಡಾಲು ಆಗುವುದಿಲ್ಲ. ಮಂಗಳೂರಿನ ಪೊಲೀಸರು ಒಳ್ಳೆ ಕೆಲಸವನ್ನೇ ಮಾಡುತ್ತಿದ್ದಾರೆ. ಆದರೆ ಅವರ ಸಂಖ್ಯೆ ಸಾಲದು. ಆದರೂ ಬರಹ ಬರೆದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತದೆ ಎಂದಿದ್ದಾರೆ.

 
 
 
 
 
 
 
 
 
 
 

Leave a Reply