ಉಡುಪಿ: ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಯುವತಿ ರಕ್ಷಿತಾ ನಾಯಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಪ್ರಶಾಂತ್ ಕುಂದರ್ ನನ್ನು ಭಾನುವಾರದಂದು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪ್ರಶಾಂತ್ ವಿರುದ್ಧ ಅತ್ಯಾಚಾರ ಮತ್ತು ಆತ್ಮ ಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಪ್ರಶಾಂತ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದ ರಕ್ಷಿತಾ, ಅ.24ರ ರಾತ್ರಿ ಉಡುಪಿಯ ಖಾಸಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.ರಕ್ಷಿತಾ ಸಾವನ್ನಪ್ಪಿದ ಸಂಜೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು ಆಕೆಯನ್ನು ಆಟೋದಲ್ಲಿ ಕರೆತಂದ ಪ್ರಶಾಂತ್ ಕುಂದರ್, ಆಸ್ಪತ್ರೆಯ ಸ್ಟ್ರೆಚ್ಚರ್ಗೆ ಹಾಕಿ ಪರಾರಿಯಾಗಿದ್ದ. ಇದಾದ ಕೆಲವೇ ಕ್ಷಣದಲ್ಲಿ ಯುವತಿ ಮೃತಪಟ್ಟಿದ್ದಳು. ಆಕೆಯ ಹೆತ್ತವರಿಗೂ ಆತನೇ ಕರೆ ಮಾಡಿ ವಿಷಯ ತಿಳಿಸಿದ್ದು ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ.
ಇನ್ನು ರಕ್ಷಿತಾಳ ಪಾಲಕರು ತಮ್ಮ ಮಗಳ ಸಾವು ಅನುಮಾನಾಸ್ಪದ ಎಂದು ದೂರು ದಾಖಲಿಸಿದ್ದರು. ನಂತರ ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸಿದ ಪೊಲೀಸರು ಪ್ರಶಾಂತ್ ಕುಂದರ್ನನ್ನು ಕಳೆದ ಸೋಮವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಭಾನುವಾರ ಬಂಧಿಸಲಾಗಿದೆ.